ಶಿರಸಿ (ಮಾ.7) : ಎಸ್ಡಿಪಿಐ , ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಹಿಂದೂಪರ ಸಂಘಟನೆಗಳ ಒತ್ತಾಯ ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ಸಂಘಟನೆಗಳನ್ನು ನಿಷೇಧಿಸುವ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.ನಿಷೇಧಿಸಿದರೆ ಅವರು ಬೇರೆ ಹೆಸರಿನ ಸಂಘಟನೆ ಕಟ್ಟಿಕೊಳ್ಳುವ ಸಾಧ್ಯತೆ ಇದೆ.
ಹೀಗಾಗಿ ಅವರ ಕಾರ್ಯ ಚಟುವಟಿಕೆ ಬಗ್ಗೆ ನಿಗಾ ಇಡಲಾಗುವುದು ಎಂದು ತಿಳಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಡಿಪಿಐ ನಿಷೇಧಿಸುವುದಾದರೆ ಆ ಕೆಲಸವನ್ನು ಕೇಂದ್ರ ಮಾಡಬೇಕು. ಕೆಲವು ರಾಜ್ಯಗಳು ತಾವೇ ಮುಂದಾಗಿ ನಿಷೇಧಿಸಿವೆಯಾದರೂ ಕರ್ನಾಟಕದಲ್ಲಿ ನಿಷೇಧಿಸುವ ಪ್ರಸ್ತಾಪ ಇಲ್ಲ. ಅವರ ಕಾರ್ಯ ಚಟುವಟಿಕೆಯ ವರದಿಯನ್ನು ನಿರಂತರವಾಗಿ ಕೇಂದ್ರಕ್ಕೆ ಸಲ್ಲಿಸುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಉತ್ತಮವಾಗಿದೆ. ಶಿವಮೊಗ್ಗ, ಆಳಂದ ಘಟನೆ ಹೊರತುಪಡಿಸಿದರೆ ಬೇರೆಲ್ಲೂ ಇಂತಹ ಘಟನೆ ನಡೆದಿಲ್ಲ. ಶಿವಮೊಗ್ಗದಲ್ಲಿ ಕೊಲೆ ನಡೆಸಿದ ವ್ಯಕ್ತಿಗಳನ್ನು ತ್ವರಿತವಾಗಿ ಬಂಧಿಸಿ ಅವರ ಹೆಡೆಮುರಿ ಕಟ್ಟಿದ್ದೇವೆ ಎಂದರು. ಇನ್ನು ಕೆಲವು ಪ್ರಕರಣಗಳಲ್ಲಿ ಅಮಾಯಕ ಹಿಂದೂಗಳ ಮೇಲೆ ಪ್ರಕರಣಗಳಾಗಿವೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ವಾಸ್ತವ ತಿಳಿಸಿಕೊಡುವ ಕಾರ್ಯ ಆಗುತ್ತಿದೆ ಎಂದು ಹೇಳಿದರು.