ಕಾರವಾರ: ಪ್ರವೀಣ ಅವರ ಹತ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಕುರುಹು ಸಿಕ್ಕಿದ ಬಳಿಕ ಸಾಕಷ್ಟು ಆರೋಪಿಗಳ ಬಂಧನವಾಗಿದ್ದು ಮಿಕ್ಕ ಎಲ್ಲ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕಾರವಾರದಲ್ಲಿ ಪತ್ರಕರ್ತ ಮಾತನಾಡಿದ ಅವರು ತನಿಖೆಯನ್ನು ದಿಕ್ಕು ತಪ್ಪಿಸುವ, ಒಬ್ಬ ಆರೋಪಿಯ ಬದಲು ಇನ್ನೊಬ್ಬ ಆರೋಪಿಯನ್ನು ಕೊಡುವಂತಹ ತಂತ್ರಗಾರಿಕೆ ನಡೆಯಬಹುದು. ಆದರೆ ಗೃಹ ಇಲಾಖೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಇಂತಹ ದುರಂತಗಳಿಗೆ ಕಡಿವಾಣ ಹಾಕುವ ತೀರ್ಮಾನ ಮಾಡಿದ್ದಾರೆ. ಎಂತಹ ಕಠಿಣ ಪರಿಸ್ಥಿತಿ ಇದ್ದರೂ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದರು.
ಈಗ ಪ್ರವೀಣ ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನೂ ಬಂಧಿಸುವ ಕೆಲಸ ಆಗುತ್ತಿದೆ. ಜೊತೆಗೆ ಈ ಪ್ರಕರಣಕ್ಕೆ ಪೂರಕವಾಗಿ ಅಕ್ಕ ಪಕ್ಕದಲ್ಲಿ ನಡೆದಿರುವ ಇತರ ಕೊಲೆ ಪ್ರಕರಣಗಳಲ್ಲಿಯೂ ಯಾವ ವರ್ಗವನ್ನೂ ಗಮನಿಸದೆ ನಿರ್ದಾಕ್ಷೀಣ್ಯವಾಗಿ ಎಲ್ಲ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಸಿಎಂ ಹೇಳಿದ್ದು ಅದರಂತೆ ನಡೆದುಕೊಳ್ಳಲಾಗುತ್ತಿದೆ. ಕಾಂಗ್ರೆಸ್ ನವರು ನಮ್ಮನ್ನು ದೂರುವುದಕ್ಕಾಗಿಯೇ ಇದ್ದಾರೆ. 23 ಕೊಲೆಗಳಾದಾಗ ನೀವೇನು ಮಾಡುತ್ತಿದ್ದಿರಿ? ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸುತ್ತಿದ್ದೇನೆ. ಅವರ ಅವಧಿಯಲ್ಲಿ ಆರೋಪಗಳಿರುವ ಹಲವರನ್ನು ಬಿಡುಗಡೆ ಮಾಡಿರುವುದು ಆಗಿದೆ. ಅಂತಹವರಿಂದ ನಡೆದ ಘಟನೆಗಳ ಅನಾಹುತಗಳೇ ಈಗ ಮುಂದುವರಿದಿವೆ ಎಂದು ಆರೋಪಿಸಿದರು.
ಗುಪ್ತಚರ ಮಾಹಿತಿಯನ್ನು ಯಾವ ರೀತಿ ತೆಗೆದುಕೊಳ್ಳಬೇಕೋ ಆ ರೀತಿ ತೆಗೆದುಕೊಳ್ಳಲಾಗಿದೆ. ಗುಪ್ತಚರ ಮಾಹಿತಿ ಎಲ್ಲವನ್ನೂ ಬಹಿರಂಗ ಗೊಳಿಸುವ ಅಗತ್ಯ ಇಲ್ಲ. ಜಿಲ್ಲಾಡಳಿತ ಈ ಬಗ್ಗೆ ಮಾಹಿತಿ ಪಡೆದು ಅವಶ್ಯ ಇರುವುದನ್ನು ರಾಜ್ಯಕ್ಕೆ ರವಾನಿಸುತ್ತದೆ. ಸಾಮಾನ್ಯವಾಗಿ ನಡೆಯುವ ಹಲ್ಲೆ ಪ್ರಕರಣಗಳಿಗೂ ಕಡಿವಾಣ ಹಾಕಲಾಗುತ್ತದೆ. ಗುಪ್ತಚರ ಇಲಾಖೆಯನ್ನು ಮತ್ತಷ್ಟು ಬಲಪಡಿಸಲಾಗುತ್ತದೆ ಎಂದರು. ಈ ವೇಳೆ ಕುಮಟಾ ಶಾಸಕ ದಿನಕರ ಶೆಟ್ಟಿ ಇದ್ದರು.