News Kannada
Sunday, October 01 2023
ಉತ್ತರಕನ್ನಡ

ಗೋಕರ್ಣ: ಸಮಚಿತ್ತತೆಯಿಂದ ಮನುಷ್ಯ ಮಹಾತ್ಮನಾಗಬಲ್ಲ- ರಾಘವೇಶ್ವರ ಶ್ರೀ

Gokarna: A man can become mahatma with equanimity: Raghaveswara Sri
Photo Credit : By Author

ಗೋಕರ್ಣ: ಸಮಚಿತ್ತತೆ ಅಥವಾ ಸ್ಥಿರ ಚಿತ್ತತೆಯೇ ನಮಗೆ ಕಷ್ಟಕಾಲದಲ್ಲಿ ನೆರವಿಗೆ ಬರುವಂಥದ್ದು. ಎಂಥ ದುಃಖ, ಕಷ್ಟ ಬಂದರೂ, ಗಟ್ಟಿತನದಿಂದ ಅದನ್ನು ಎದುರಿಸಬೇಕು. ಇಂಥ ಸಮಚಿತ್ತತೆ ಸಾಮಾನ್ಯ ಮನುಷ್ಯನನ್ನೂ ಮಹಾತ್ಮನಾಗಿಸಬಲ್ಲದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಹಿಗ್ಗು- ಕುಗ್ಗುಗಳಲ್ಲಿ ವಿಚಲಿತರಾಗಬಾರದು. ಸುಖಬಂದಾಗ ಹಿಗ್ಗುವುದು ಹಾಗೂ ದುಃಖ ಬಂದಾಗ ಕುಗ್ಗುವುದು ನಮ್ಮ ಸಹಜ ಗುಣ. ಸುಖ ಬಂದಾಗ ಅಥವಾ ಕಷ್ಟಬಂದಾಗ ‘ಇದು ಹೀಗೇ ಇರದು’ ಎಂಬ ಭಾವನೆ ನಮ್ಮಲ್ಲಿರಬೇಕು ಎಂದು ಸೂಚಿಸಿದರು.

ನೂರು ವರ್ಷವಾದರೂ ನಾವು ಸಹನೆಯಿಂದ ಕಾಯುತ್ತಿದ್ದರೆ ಸಹಜವಾಗಿಯೇ ಅದಕ್ಕೆ ಫಲ ಸಿಗುತ್ತದೆ. ನಹುಶ ಸತ್ಕಾರ್ಯಗಳಿಂದ ಇಂದ್ರ ಪದವಿ ಪಡೆದ. ಆದರೆ ಆ ಸುಖದ ಸುಪ್ಪತ್ತಿಗೆ ನೆತ್ತಿಗೆ ಅಡರಿದಾಗ ಸಪ್ತ ಋಷಿಗಳು ಈತನನ್ನು ಪಲ್ಲಕ್ಕಿಯಲ್ಲಿ ಹೊರುವಂತಾಗಬೇಕಾಯಿತು. ಇದರಿಂದ ಶಾಪಗ್ರಸ್ಥನಾಗಿ ಸರ್ಪವಾಗಿ ಭೂಮಿಗೆ ಬಂದ ಎಂದು ಬಣ್ಣಿಸಿದರು.

ಹಲ್ಲು ಹುಟ್ಟುವಾಗ ಬರುವ ಜ್ವರಕ್ಕೆ ಒಳಗಾಗದ ಶಿಶು ಇರಲು ಸಾಧ್ಯವೇ ಇಲ್ಲ; ಅಂತೆಯೇ ವಿಧಿಯೊದಗೆ ಸಿಲುಕದ ನರಜಂತು ಇಲ್ಲ. ಒದೆಪೆಟ್ಟು ಮುಗಿದಾಗ ರಾಹುವಿನ ಬಾಯಿಯಿಂದ ಹೊರಬಂದ ಗ್ರಹಣಮುಕ್ತ ಚಂದ್ರನಂತೆ ಕಂಗೊಳಿಸಬಹುದು ಎಂಬ ಮಂಕುತಿಮ್ಮನ ಕಗ್ಗವನ್ನು ಉಲ್ಲೇಖಿಸಿದರು. ಎಲ್ಲ ಕಡಲು ಒಂದಾದರೂ, ಭೂಮಿಯೇ ದೂಳಾದರೂ ಒಳನೆಮ್ಮದಿಯನ್ನು ಕಳೆದುಕೊಳ್ಳಬೇಡ. ಗಾಬರಿಯನ್ನು ಬಿಡಬೇಕು. ಕಡಲಿನ ನೆರೆ ಕೆಳಗಿಳಿಯುತ್ತದೆ; ಮೇಲೆದ್ದ ಧೂಳು ಕೆಳಗಿಳಿಯಲೇಬೇಕು. ಎಲ್ಲಕ್ಕೂ ಒಂದು ಗಡುವು ಇದೆ. ಅದಕ್ಕೆ ಕಾಯುವ ಮನಸ್ಥಿತಿ ನಮ್ಮದಾಗಿರಬೇಕು ಎಂದು ಸೂಚಿಸಿದರು.

ಎಂಟಾಣೆಯನ್ನು ಜತನದಿಂದ ಕಾಪಾಡಿಕೊಂಡು ಬಂದ ಸಂದರ್ಭವನ್ನು, ರಾಮಚಂದ್ರಾಪುರ ಮಠದ ಉಚ್ಛ್ರಾಯ ಸ್ಥಿತಿಗೆ ಏರಿದ ಕ್ಷಣವನ್ನು, ಬಳಿಕ ಬಂದ ಕಷ್ಟಗಳ ಸರಮಾಲೆಯನ್ನು, ಬಳಿಕ ಗೋಸ್ವರ್ಗದಂಥ ಅದ್ಭುತ ಸೃಷ್ಟಿಸಿದ ಕ್ಷಣವನ್ನು ನೆನಪಿಸಿಕೊಂಡು ತಮ್ಮದೇ ಬದುಕಿನ ಏರಿಳಿತಗಳನ್ನು ಉದಾಹರಿಸಿದರು. ಬದುಕು ಕೂಡಾ ನೇರ ದಾರಿಯಾಗಿರದು; ತಿರುವು, ಏರು ತಗ್ಗು, ಕಲ್ಲು ಮುಳ್ಳುಗಳಿಂದ ಕೂಡಿರುತ್ತದೆ. ಅದನ್ನು ಎದುರಿಸುವ ಸಮಚಿತ್ತ ನಮಗೆ ಬೇಕು. ಸವಾಲುಗಳು ಇಲ್ಲದಿದ್ದರೆ ಜೀವನಕ್ಕೆ ಸ್ವಾರಸ್ಯವೇ ಇಲ್ಲ. ಆದರೆ ಸುಖ- ದುಃಖದ ಸಂದರ್ಭದಲ್ಲೂ ಕರ್ತವ್ಯ ಪರತೆಯನ್ನು ಮರೆಯದಿದ್ದರೆ ಆತ ಮಹಾತ್ಮನಾಗಬಲ್ಲ ಎಂದು ಎಂದು ವಿಶ್ಲೇಷಿಸಿದರು.ಸುಖ- ದುಃಖ, ಲಾಭ-ನಷ್ಟ, ಜಯ- ಅಪಜಯಗಳ ಚಿಂತೆ ಮಾಡದೇ ಬದುಕಿನ ಯುದ್ಧದಲ್ಲಿ ಹೋರಾಡಬೇಕು. ಧನ, ಜನ, ಗರ್ವ ಎಲ್ಲವೂ ಕ್ಷಣಮಾತ್ರದಲ್ಲೇ ಕಾಲ ಎಲ್ಲವನ್ನೂ ಅಪಹರಿಸಬಲ್ಲದು ಎಂಬ ಶಂಕರರ ಶ್ಲೋಕವನ್ನು ಉದಾಹರಿಸಿದರು. ಈ ಸೂತ್ರವನ್ನು ಬದುಕಿನಲ್ಲಿ ಪಾಲಿಸಿದರೆ ಸುಖವಾಗಿ ಇರಬಹುದು.

ಸತತವಾಗಿ ಕರ್ತವ್ಯಪರತೆಯನ್ನು ಮರೆಯಬಾರದು. ಎಚ್ಚರ ಇರುವಷ್ಟೂ ಹೊತ್ತು ಕರ್ತವ್ಯ ಪಾಲನೆ ಮಾಡುವುದೇ ಸರಿ ಎಂದು ಪ್ರತಿಪಾದಿಸಿದರು.

See also  ಮೈಸೂರು: ನರೇಗಾ ಯೋಜನೆ ಸೌಲಭ್ಯ ಜನತೆಗೆ ತಲುಪಿಸಿ: ಜಿಟಿಡಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು