ಕಾರವಾರ: ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ. ಎಸ್. ವಿಜಯಕುಮಾರ ಹೇಳಿದರು.
ನಗರದ ಪ್ರೀಮಿಯರ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಿವಿಧ ಇಲಾಖೆ, ಸಂಘ ಸಂಸ್ಥೆ ಹಾಗೂ ನಿಗಮಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕ ತನ್ನ ದಿನ ನಿತ್ಯ ಜೀವನದಲ್ಲಿ ಯಾವ ರೀತಿ ಎಚ್ಚರಿಕೆ ವಹಿಸಬೇಕು ಪ್ರತಿ ವಸ್ತುವಿನ ಖರೀದಿಯಲ್ಲಿ ರಶೀದಿ ತುಂಬಾ ಮುಖ್ಯವಾಗಿರುತ್ತದೆ, ಅಮಾಯಕ ಗ್ರಾಹಕರಿಗೆ ಸಾಕಷ್ಟು ಮೋಸವಾಗುತ್ತಿದೆ, ಗ್ರಾಹಕರ ವೇದಿಕೆ ಇರುವುದು ಪ್ರತಿಯೊಬ್ಬರಿಗೂ ಗೊತ್ತಾಗುವಂತಾಗಬೇಕು ಎಂದರು.
ಬಳಿಕ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ರವರು ಮಾತನಾಡಿ, ಮಾರುಕಟ್ಟೆಯಲ್ಲಿ ಗ್ರಾಹಕರು ಯಾವ ರೀತಿ ಎಚ್ಚೆತ್ತುಕೊಳ್ಳಬೇಕು, ದಿನನಿತ್ಯ ಗ್ರಾಹಕ ಈ-ಕಂಜೂಮರ್ ನಲ್ಲಿ ಜೀವನವನ್ನು ತೊಡಗಿಸಿಕೊಂಡಿರುತ್ತಾನೆ, ಇದರ ಸಾಧಕ ಬಾದಕ ಗ್ರಾಹಕನಿಗೆ ಗೊತ್ತಿರಬೇಕು ಎಂದು ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ರೇಣುಕಾ ಡಿ ರಾಯ್ಕರ್ ರವರು ಮಾತನಾಡಿ, ಜನಸಾಮಾನ್ಯರು ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುವಾಗ ತುಂಬಾ ಎಚ್ಚರಿಕೆಯನ್ನು ವಹಿಸಿ ಖರೀದಿಸಬೇಕಾಗುತ್ತದೆ ಏಕೆಂದರೆ ಅವಧಿ ಮುಗಿದಂತ ವಸ್ತುಗಳನ್ನು ಉಪಯೋಗಿಸುವುದರಿಂದ ಆರೋಗ್ಯದ ಮೇಲೆ ವ್ಯತರಿಕ್ತವಾದ ಪರಿಣಾಮ ಬೀರುತ್ತದೆ ಈ ಬಗ್ಗೆ ಗಮನಹರಿಸಿ ವಸ್ತುವಿನ ಅವಧಿಯು ಮುಗಿದಿದೆಯೋ ಅಥವಾ ಮುಗಿದಿಲ್ಲದಿರುವುದರ ಬಗ್ಗೆ ಖಾತ್ರಿಪಡಿಸಿಕೊಂಡು ಉಪಯೋಗಿಸಬೇಕು ಎಂದರು. ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಹಳ್ಳಿಯ ಜನರಿಗೆ ಈ ಬಗ್ಗೆ ಅರಿವು ಮೂಡಿಸಬೇಕು ಎಂದರು. ಬಳಿಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರು ಕೆವಿ ಸುರೇಂದ್ರ ಕುಮಾರ್ ರವರು ಮಾತನಾಡಿ, ಗ್ರಾಹಕರ ದಿನಾಚರಣೆಯ ಕುರಿತಂತೆ ಅದು ನಡೆದ ಬಂದ ಹಾದಿಯನ್ನು ತಿಳಿಸಿದರು.
ಕಾರ್ಯಕ್ರಮಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ನಜೀರ್ ಅಹ್ಮದ್ ಯು ಶೇಖ್, ಪ್ರಾಂಶುಪಾಲರು ಗೋವಿಂದಪ್ಪ ಆರ್ , ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಯ ಉಪನಿರ್ದೇಶಕ ಮಂಜುನಾಥ ರೇವಣಕರ್, ಸಹಾಯಕ ನಿಯಂತ್ರಕರು ರಾಮಚಂದ್ರ ಶರ್ಮಾ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.