ಕಾರವಾರ: ಕಾವಿ ಆರ್ಟ್’ನ ಖ್ಯಾತ ಕಲಾವಿದೆ ಶೋಭಾ ಭಟ್ ಕಾರ್ಣಿಕ (೫೨) ಅವರು ನಿಧನರಾಗಿದ್ದಾರೆ. ಶೋಭಾ ಅವರ ಮಾರ್ಗದಲ್ಲಿ ಹಾಗೂ ಹಿಂದಿನ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಗಿಲನ್ ಅವರ ಸಹಕಾರದಲ್ಲಿ ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಿಡಿಸಲಾಗಿರುವ ಕಾವಿ ಆರ್ಟ್ ಇಂದಿಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡುವವರ ಗಮನ ಸೆಳೆಯುತ್ತಿದೆ.
ಕುಮಟಾ ತಾಲೂಕಿನ ಹಳದಿಪುರ ಮೂಲದವರಾದ ಅವರು ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಮಿರ್ಜಾನ ಹಾಗೂ ಕೋಡ್ಕಣಿಯಲ್ಲಿ ಮುಗಿಸಿ ನಂತರ ಕುಮಟಾದ ದಾ. ಎ. ವಿ. ಬಾಳಿಗಾ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಎರಡನೇ ಪಿಯು ವರೆಗೆ ಓದಿದ್ದರು. ಹುಬ್ಬಳ್ಳಿಯಲ್ಲಿ ತಮ್ಮ ಇಂಜಿನಿಯರಿಂಗ್ ಪದವಿಯನ್ನು ಮುಗಿಸಿದ ನಂತರ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. ಆನಂತರ ತಮ್ಮ ವೃತ್ತಿಗೆ ರಾಜೀನಾಮೆ ನೀಡಿ ಶೋಭಾ ಅವರು ಉತ್ತರ ಕನ್ನಡದಲ್ಲಿ ಕಣ್ಮರೆಯಾಗುತ್ತಿರುವ ಹಳೆಯ ಕಾವಿ ಕಲೆಯ ಬಗ್ಗೆ ಹಾಗೂ ಉತ್ತರಕನ್ನಡದ ಜಾನಪದ ಪ್ರಾಕಾರಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದರು.
ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅವರ ಮೇಲುಸ್ತುವಾರಿಯಲ್ಲಿ ಬಿಡಿಸಿದ ಕಾವಿ ಕಲೆಗಳು ಸಾರ್ವಜನಿಕರ ಗಮನವನ್ನು ಸೆಳೆಯುತ್ತಿವೆ. ಉತ್ತರಕನ್ನಡ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಜೊತೆಗೆ ಸೇರಿ ಜಿಲ್ಲೆಯ ಹಲವು ಕಲೆ ಹಾಗೂ ವಿಶಿಷ್ಟ ವಸ್ತುಗಳಿಗೆ ಜಿಐ ಟ್ಯಾಗ್ ಪಡೆಯುವ ಬಗ್ಗೆಯೂ ಅವರು ಕೆಲಸ ಮಾಡುತ್ತಿದ್ದರು. ಅವರು ಅಕಾಲಿಕ ನಿಧನದಿಂದ ಕಲಾಲೋಕಕ್ಕೆ ಹಾಗೂ ಜಿಲ್ಲೆಯ ಪ್ರವಾಸೋದ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಕೆಲ ಸಮಯದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಶೋಭಾ ಅವರು ತಮ್ಮ ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.