ಕಾರವಾರ: ಜಿಲ್ಲೆಯ ಸಾರ್ವಜನಿಕ ಮತ್ತು ಸರ್ಕಾರಿ ಕಾಮಗಾರಿಗಳಿಗೆ ನದಿ ಮರಳಿಗೆ ಪರ್ಯಾಯವಾಗಿ ಎಂ-ಸ್ಯಾಂಡ್ ಬಳಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಹಾಗೂ ಪ್ರಸ್ತುತ ಜಿಲ್ಲೆಯಲ್ಲಿ ಎಂ-ಸ್ಯಾಂಡ್ ಉತ್ಪಾದನೆ ಕಡಿಮೆ ಇದ್ದು ಕೃಷರ ಘಟಕಗಳಿಂದ ಇದರ ಉತ್ಪಾದನೆಗೆ ಉತ್ತೇಜನ ನೀಡಿ ಮರಳಿನ ಪೂರೈಕೆ ಮಾಡಲು ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಸಿರು ಪೀಠದ ಆದೇಶದಂತೆ ನಿಯಂತ್ರಣ ವಲಯದಲ್ಲಿ ಮರಳು ದಿಬ್ಬ ತೆರವುಗೊಳಸುವಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಮರಳನ್ನು ತೆರವುಗೊಳಿಸಲು ಅನುಮತಿ ಕೋರಿ ಪ್ರಸ್ತಾವನೆ ಸರ್ಕಾರದ ಹಂತದಲ್ಲಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ಮರಳಿನ ಪೂರೈಕೆ ಇಲ್ಲದಿರುವುದರಿಂದ ಹೊಸ ಮರಳು ನೀತಿ-2020 ರಲ್ಲಿ ನೀಡಿರುವ ಅವಕಾಶಗಳ ಅನುಸಾರ ಸಾರ್ವಜನಿಕ ಮತ್ತು ಸರ್ಕಾರಿ ಕಾಮಗಾರಿಗಳಿಗೆ ಮರಳು ಒದಗಿಸುವ ದೃಷ್ಟಿಯಿಂದ ಅಣೆಕಟ್ಟು, ಜಲಾಶಯ, ಹಾಗೂ ಅಣೆಕಟ್ಟು ಜಲಾಶಯಗಳ ಹಿನ್ನೀರಿನ ನದಿ ಪಾತ್ರದ ಪ್ರದೇಶಗಳಲ್ಲಿರುವ ಹೂಳಿನಲ್ಲಿ ದೊರೆಯಬಹುದಾದ ಮರಳನ್ನು ತೆರವುಗೊಳಿಸುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಜಲಾಶಯಗಳಲ್ಲಿ ಶೇಖರಣೆಯಾಗಿರುವ ಮರಳು ಪ್ರಮಾಣದ ಮಾಹಿತಿಯನ್ನು ಕೆಪಿಸಿಎಲ್ ರವರು ತುರ್ತಾಗಿ ಪಡೆದು ಜಿಲ್ಲಾಡಳಿತಕ್ಕೆ ಒದಗಿಸುವಂತೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿ ಪರಿಶೀಲನೆ ಕೈಗೊಂಡು ಹೂಳು ತೆರವುಗೊಳಿಸುವ ಸಾಧಕ-ಬಾಧಕಗಳ ಕುರಿತು ಪರಿಶೀಲನೆ ನಡೆಸಿ ತುರ್ತಾಗಿ ವರದಿ ಸಲ್ಲಿಸುವಂತೆ ಸೂಚಿಸಿದರು. ಸಭೆಯಲ್ಲಿ ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ , ಉಪವಿಭಾಗಾಧಿಕಾರಿಗಳು ಜಯಲಕ್ಷ್ಮಿ ರಾಯಕೋಡ, ಡಿಸಿಎಫ್ ಪ್ರಶಾಂತ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.