ಕೊಪ್ಪ : ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವಕ್ಕಾಗಿ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದರು. ಬಿಜೆಪಿ ಮಹಾಶಕ್ತಿ ಕೇಂದ್ರ ಪಟ್ಟಣದ ಹೊರವಲಯದ ಅನ್ನಪೂರ್ಣ ಲೇಔಟ್ನಲ್ಲಿ ಏರ್ಪಡಿಸಿದ್ದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.
೧೪೦ ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಕೋವಿಡ್ ವ್ಯಾಕ್ಸಿನ್ ತಯಾರಿಸಿ ಅದನ್ನು ಇತರೆ ದೇಶಗಳಿಗೂ ನೀಡಿ ಭಾರತಿಯರಿಗೆ ಉಚಿತವಾಗಿ ನೀಡುವುದು ಸುಲಭದ ಮಾತಲ್ಲ. ಸರ್ವರನ್ನೂ ಗಮನದಲ್ಲಿರಿಸಿ ಯೋಜನೆ ರೂಪಿಸಲು ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಕೈಗೊಂಡ ಈ ದೃಢ ನಿರ್ಧಾರದಿಂದಾಗಿ ಮಾಸ್?ಕ ಇಲ್ಲದೆ ಹೊರಗೆ ಓಡಾಡಲು, ಒಬ್ಬರ ಪಕ್ಕ ಒಬ್ಬರು ಕುಳಿತು ಆತ್ಮೀಯತೆಯಿಂದ ಮಾತನಾಡಲು ಸಾಧ್ಯವಾಗಿದೆ ಎಂದ ಅವರು, ಯಾವುದೇ ವ್ಯಾಕ್ಸಿನ್ ತಯಾರಿಕೆ, ಆಕ್ಸಿಜನ್ ತಯಾರಿಕೆ ನಮ್ಮ ದೇಶದಲ್ಲಿ ಇರಲ್ಲಿಲ್ಲ, ಮೋದಿಯವರು ಪ್ರಧಾನಿಯಾದ ಮೇಲೆ ಇದು ಸಾಧ್ಯವಾಗಿದೆ, ಪ್ರತಿ ತಾಲೂಕು ಕೇಂದ್ರದಲ್ಲಿಯೂ ಆಕ್ಸಿಜನ್ ಘಟಕಗಳಿದ್ದು ಸಹಸ್ರಾರು ಪ್ರಾಣ ಉಳಿಯುವಂತಾಗಿದೆ ಎಂದರು.
ಭಾರತಿಯ ಸೇನಾಪಡೆ, ಕೃಷಿ ವಲಯ, ಶಿಕ್ಷಣ, ಅರೋಗ್ಯ, ಆಹಾರ ಎಲ್ಲಾ ಕ್ಷೇತ್ರಗಳಿಗೂ ನ್ಯಾಯ ಒದಗಿಸುತ್ತಿರುವ ಪ್ರಧಾನಿ ಮೋದಿಯವರಿಗೆ ಮತ್ತಷ್ಟುಬಲ ತುಂಬಲು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿಮ್ಮ ಆಯ್ಕೆಯಾಗಬೇಕು ಎಂದು ಹೇಳಿದರು.
ಕೊಪ್ಪದಂತಹ ಊರಿನಲ್ಲಿಯು ೧೨ ಕೋಟಿ ವೆಚ್ಚದಲ್ಲಿ ತಾಯಿ ಮಗುವಿನ ಅಸ್ಪತ್ರೆಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದ್ದು ಈಗಾಗಲೇ ನಿರ್ಮಾಣಗೊಂಡು ಶೀಘ್ರದಲ್ಲಿಯೇ ಉದ್ಘಾಟನೆಯಾಗಲಿದೆ. ಬೊಮ್ಮಯಿ ಅವರ ಸರ್ಕಾರದ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಸಾಕಷ್ಟುಅನುದಾನ ಹರಿದು ಬಂದಿದೆ.
ಅದು ಫಲಾನುಭವಿಗಳನ್ನು ತಲುಪುವ ಬದಲು ಶಾಸಕರ ಅಪ್ತವಲಯಕ್ಕೆ ತಲುಪಿದೆ. ೨೦೧೮ರಲ್ಲಿ ಜೀವರಾಜ್ ಶಾಸಕರಾಗಿ ಆಯ್ಕೆಯಾಗಿದ್ದಲ್ಲಿ ಕ್ಷೇತ್ರದ ಚಿತ್ರಣವೆ ಬದಲಾಗುವ ಅವಕಾಶವಿತ್ತು. ಈ ಬಾರಿ ಜೀವರಾಜ್ ಮೇಲೆ ಎಲ್ಲಾ ತಾಯಂದಿರ ಆಶೀರ್ವಾದ ವಿರಲಿ ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಮಾತನಾಡಿ, ಶಾಸಕರಾಗಿ, ಸಚಿವರಾಗಿದ್ದ ಸಂದರ್ಭದಲ್ಲಿ ಯಾವುದೇ ಭೇದವಿಲ್ಲದೆ ಪ್ರಾಮಾಣಿಕವಾಗಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ ಎಂದರು.
ಯಾವುದೇ ತಪ್ಪು ಮಾಡಿಲ್ಲ, ಆದರೂ ಏಕೆ ಸೋತಿದ್ದೇನೆಂದು ಅರ್ಥವಾಗಿಲ್ಲ, ಈ ಬಾರಿ ತಮ್ಮ ಸೇವೆಗೆ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಸುಧಾ ಮೊಹನ್, ರಾಜ್ಯ ಪ್ರಕೋಷ್ಟದ ಸಂಚಾಲಕ ಎಸ್.ಎನ್. ರಾಮಸ್ವಾಮಿ, ತಾಲೂಕು ಆಧ್ಯಕ್ಷ ಅದ್ದಡ ಸತೀಶ್, ಜಿಪಂ ಮಾಜಿ ಸದಸ್ಯೆ ದಿವ್ಯ ದಿನೇಶ್, ತಾಪಂ ಮಾಜಿ ಆಧ್ಯಕ್ಷೆ ಪದ್ಮಾವತಿ ರಮೇಶ್, ದಿನೇಶ್ ಹೊಸೂರು ಉಪಸ್ಥಿತರಿದ್ದರು.