ಕಾರವಾರ: ನಾನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದು, ರಾಷ್ಟ್ರೀಯ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
ಕಾರವಾರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಸೂಚನೆಯ ಮೇರೆಗೆ ಕೇವಲ 30 ದಿನವಿರುವಾಗ ಲೋಕಸಭಾ ಚುನಾವಣಾ ಕಣಕ್ಕೆ ಜೆಡಿಎಸ್ನಿಂದ ಇಳಿದಿದ್ದೆ. ಆದರೆ ನಾನು ಅಂದು ಯಾವುದೇ ಪೂರ್ವ ತಯಾರಿಯಲ್ಲಿ ಇರಲಿಲ್ಲ. ಜೆಡಿಎಸ್ನಲ್ಲಿ ಸಂಘಟನೆ ಕೂಡ ಇರಲಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದ ಕಾರಣ ನಾವು ಕಾಂಗ್ರೆಸ್ನ ಮೇಲೆಯೇ ಸಂಪೂರ್ಣ ಅವಲಂಬಿತವಾಗುವ ಸಂದರ್ಭವಿತ್ತು. ಅಂದ ಕೆಲವು ಕಾಂಗ್ರೆಸ್ ನಾಯಕರು ನನಗೆ ಬೆಂಬಲ ನೀಡಲು ವಿರೋಧ ಮಾಡಿದರೂ, ಎಂಟೂ ಕ್ಷೇತ್ರಗಳಲ್ಲಿ ಓಡಾಡಿ 3- 4 ಲಕ್ಷ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೆ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ನಾನು ಗಂಭೀರ ಆಕಾಂಕ್ಷಿ. ಕ್ಷೇತ್ರದಲ್ಲಿ ಸುಮಾರು 25 ವರ್ಷಗಳಿಂದ ಹಿಂದುಳಿದವರಿಗೆ ಅವಕಾಶ ಸಿಕ್ಕಿಲ್ಲ. ನಾನೊಬ್ಬ ಹಿಂದುಳಿದವನಾಗಿ ಅವಕಾಶಕ್ಕಾಗಿ ಈ ಬಾರಿ ಸ್ಪರ್ಧಿಸುತ್ತಿದ್ದೇನೆ ಎಂದ ಅವರು, ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಲೋಕಸಭಾ ಕ್ಷೇತ್ರದ ಎಲ್ಲಾ ಶಾಸಕರಿಗೆ ಅಭಿನಂದಿಸುವೆ.
ಪಕ್ಷಾತೀತವಾಗಿ ನಾವೆಲ್ಲ ಕ್ಷೇತ್ರದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ರಾಜಕಾರಣ ಮಾಡೋಣ. ಅಭಿವೃದ್ಧಿಗಾಗಿ ನಾನು ಈ ಎಲ್ಲಾ ಶಾಸಕರೊಂದಿಗೆ ಸದಾ ಕಾಲ ಬೆಂಬಲವಾಗಿರುತ್ತೇನೆ. ಬರುವ ದಿನಗಳಲ್ಲಿ ರಾಷ್ಟ್ರೀಯ ಪಕ್ಷಕ್ಕೆ ಸೇರ್ಪಡೆಯಾಗಿ ನನ್ನ ಲೋಕಸಭಾ ಕ್ಷೇತ್ರದ ಕಾರ್ಯವ್ಯಾಪ್ತಿಯಲ್ಲಿ ಪ್ರಚಾರ, ಪ್ರವಾಸ ಶುರು ಮಾಡುತ್ತೇನೆ. ಎಲ್ಲಾ ಕ್ಷೇತ್ರದಲ್ಲೂ ನನ್ನ ಕಾರ್ಯಕರ್ತರಿದ್ದಾರೆ. ಅವರ ಅಭಿಪ್ರಾಯ ಪಡೆದು ಯಾವ ಪಕ್ಷವೆಂದು ತೀರ್ಮಾನ ಕೈಗೊಂಡು ಸೇರ್ಪಡೆಯಾಗುತ್ತೇನೆ ಎಂದರು.