ಕಾರವಾರ: ರಾಷ್ಟ್ರ ಮೊದಲು, ದೇಶದ ನಾಗರಿಕ ಮೊದಲು ಎನ್ನುವುದು ಬಿಜೆಪಿಯ ಸಂಕಲ್ಪವಾಗಿದೆ. ಕರಪ್ಷನ್ (ಭ್ರಷ್ಟಾಚಾರ) ಫಸ್ಟ್ ಎನ್ನುವುದು ಕಾಂಗ್ರೆಸ್ ಸಂಕಲ್ಪವಾಗಿದೆ. ದೆಹಲಿಯಲ್ಲಿ ಕುಳಿತಿರುವ ಕಾಂಗ್ರೆಸ್ ರಾಜ ಕುಟುಂಬವೊಂದು ಅನೇಕ ವರ್ಷಗಳ ಕಾಲ ದೇಶ ಆಡಳಿತ ನಡೆಸಿ ದೇಶವನ್ನು ಲೂಟಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಂಕೋಲಾದ ಹಟ್ಟಿಕೇರಿಯ ಟೋಲ್ ಗೇಟ್ ಬಳಿಯ ಗೌರಿಕೆರೆಯಲ್ಲಿ ಬಿಜೆಪ ಸಮಾವೇಶದಲ್ಲಿ ಜಿಲ್ಲೆಯ ಆರು ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಸಾರ್ವಜನಿಕರುನ್ನು ಉದ್ದೇಶಿಸಿ ಅವರು ಬುಧವಾರ ಮಾತನಾಡಿದರು.
ದೇಶದ ವಿಕಾಸದ ಬದಲು ತಮ್ಮ ವಿಕಾಸಕ್ಕೇ ಒತ್ತು ನೀಡಿತು. ಕಪ್ಪುಹಣದಿಂದಲೇ ತಮ್ಮ ಖಜಾನೆ ತುಂಬಿರಬೇಕು ಎಂದು ಕಾಂಗ್ರೆಸ್ ಕೋಟಿಗಟ್ಟಲೇ ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಕಾಗದ ಪತ್ರಗಳನ್ನು ಸಿದ್ಧಪಡಿಸುವ ವ್ಯವಸ್ಥೆ ಜಾರಿಗೆ ತಂದಿತು, ಅವರಲ್ಲಿ ಕೆಲವರು ಹುಟ್ಟೇ ಇರಲಿಲ್ಲ ಎಂದರು. ವೇದಿಕೆ ಬಂದ ಪ್ರಧಾನಿ ಮೋದಿ ಅವರು, `ನಮಸ್ಕಾರಗಳು’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದರು. ನಾನು ಹಿಂದಿಯಲ್ಲಿ ಮಾತನಾಡಿದ್ದನ್ನು ಕನ್ನಡದಲ್ಲಿ ತರ್ಜುಮೆ ಮಾಡುವ ಅವಶ್ಯಕತೆ ಇಲ್ಲ ಎಂದು ನನಗೆ ತಿಳಿಸಿದ್ದಾರೆ. ನಾನು ನಿಮ್ಮ ಸೇವಕ, ನೀವು ಏನೂ ಹೇಳುತ್ತಿರೋ ಹಾಗೆ ಮಾಡುತ್ತೇನೆ. ನನಗೆ ಯಾರೂ ರಿಮೋಟ್ ಕಂಟ್ರೋಲ್ ಇಲ್ಲ. ನಮ್ಮ ರಿಮೋಟ್ ಕಂಟ್ರೋಲ್ 140 ಕೋಟಿ ಹಿಂದೂಸ್ತಾನಿಗಳು, ನನ್ನ ರಿಮೋಟ್ ಕಂಟ್ರೋಲ್ ನೀವೇ. ನಾನು ಹಿಂದಿಯಲ್ಲಿ ಮಾತನಾಡಬಹುದೇ ಎಂದಾಗ ಸಭೆಯಲ್ಲಿ ಜಯಕಾರದ ಮೂಲಕ ಸಮ್ಮತಿಸಲಾಯಿತು. ಇದಕ್ಕೆ ಮೋದಿ ಅವರು ಶಹಭಾಸ್ ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿಧವೆ ಆಗದಿದ್ದವರಿಗೆ, ಮದುವೆ ಆಗದೇ ಇದ್ದವರಿಗೆ ಹಣ ಹೋಗುತ್ತಿತ್ತು. ಈ ನಕಲಿ ಹಗರಣದಿಂದ ಕರ್ನಾಟಕಕ್ಕೂ ನಷ್ಟವಾಗಿದೆ. ಈ ನಕಲಿ ಸೌಲಭ್ಯ ಪಡೆದುಕೊಂಡವರ ಸಂಖ್ಯೆ ಕರ್ನಾಟಕದ ಜನಸಂಖ್ಯೆಗಿಂತ ಹೆಚ್ಚಿದೆ. ಕಾಂಗ್ರೆಸ್ ಭ್ರಷ್ಟಾಚಾರಿಗಳ ಕಪ್ಪು ಖಜಾನೆಗೆ ಈ ಹಣ ಹೋಗುತ್ತಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 4.20 ಲಕ್ಷ ಕೋಟಿ ನಕಲಿ ಪಡಿತರದಾರರಿಗೆ ಪಡಿತರ ನೀಡಲಾಗಿದೆ. 4 ಕೋಟಿ ನಕಲಿ ಹೆಸರಿಗೆ ಗ್ಯಾಸ್ ಸಬ್ಸಿಡಿ ನೀಡಲಾಗಿದೆ. 1 ಕೋಟಿ ನಕಲಿ ಹೆಸರಿಗೆ ಮಹಿಳಾ ಕಲ್ಯಾಣ ಹಣ ನೀಡಲಾಗಿದೆ. 30 ಲಕ್ಷ ನಕಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಒಟ್ಟೂ ಹತ್ತು ಕೋಟಿ ನಕಲಿ ಹೆಸರನ್ನು ಕಾಂಗ್ರೆಸ್ ಸರ್ಕಾರಿ ಕಾಗದ ಪತ್ರಗಳಲ್ಲಿ ಸೇರಿಸಿತು.
ವಿಶೇಷವೆಂದರೆ ಹತ್ತು ಕೋಟಿ ನಕಲಿ ಹೆಸರು ಹೊಂದಿದವರ ಜನ್ಮವೇ ಆಗಿರಲಿಲ್ಲ. ಈ ನಕಲಿ ಖಾತೆಗಳ ಮೂಲಕ ಹಣವೆಲ್ಲ ಬುಡದಿಂದ ತುದಿಯವರೆಗೆ ಇರುವ ಕಾಂಗ್ರೆಸ್ ನಾಯಕ ಕಿಸೆಗೆ ಹೋಗುತ್ತಿತ್ತು ಎಂದರು.ಈ ನಕಲಿ ಹಗರಣವನ್ನು ನಾನು ಬಯಲಿಗೆಳೆದಿದ್ದೇನೆ. ಅದಕ್ಕಾಗಿ ಕಾಂಗ್ರೆಸ್ನವರು ನನ್ನ ಮೇಲೆ ಮುಗಿಬೀಳುತ್ತಾರೆ. ನನ್ನನ್ನು ನಿಂದಿಸುತ್ತಾರೆ. ನನ್ನನ್ನು ವಿರೊಧಿಸುತ್ತಾರೆ ಎಂದ ಅವರು, ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದ ನಕಲಿ ಹೆಸರಗಳನ್ನು ರದ್ದು ಮಾಡಿ ಬಡವರಿಗೆ ಸೌಕರ್ಯ ಸಿಗುವಂತೆ ಬಿಜೆಪಿ ಸರ್ಕಾರ ಮಾಡಿದೆ.
ಹೀಗೆ ಮಾಡುವ ಮೂಲಕ 3.15 ಲಕ್ಷ ಕೋಟಿ ಹಣ ದುಷ್ಟರ ಕೈ ಸೇರುವುದನ್ನು ಬಿಜೆಪಿ ತಡೆದಿದೆ ಎಂದು ಅವರು ತಿಳಿಸಿದರು. ಬಿಜೆಪಿ ಸರ್ಕಾರ ಬಡವರ ಭಾವನೆಯನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿದೆ. ಬಡವನ ಜೀವನ ನಿರಾಯಾಸವಾಗಿ ನಡೆಯಲಿದೆ. ಅವರಿಗೆ ಹೊಸ ಅವಕಾಶ ಸಿಗಲಿ ಎನ್ನುವುದು ನಮ್ಮ ಧೈಯವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್, ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಸುನಿಲ್ ನಾಯ್ಕ, ಸುನಿಲ್ ಹೆಗಡೆ, ಎಂಎಲ್ಸಿಗಳಾದ ಗಣಪತಿ ಉಳ್ವೇಕರ್ ಶಾಂತಾರಾಮ್ ಸಿದ್ದಿ ಹಾಗೂ ಇನ್ನಿತರರು ಇದ್ದರು.