ಕಾರವಾರ: ಯಾವ ಕಾಲಕ್ಕೆ ಏನು ನಿರ್ಣಯ ತೆಗೆದುಕೊಳ್ಳಬೇಕು ಎಂದು ನನಗೆ ಗೊತ್ತು. ಯಾರು ನಮ್ಮಿಂದ ಹೆಚ್ಚು ಸಹಾಯ ಪಡೆದಿದ್ದಾರೋ ಅವರೇ ಇಂದು ನಮಗೆ ವಿರೋಧಿಗಳಾಗಿದ್ದಾರೆ ಎಂದು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಮುಂಡಗೋಡ ಪಟ್ಟಣದ ಹಳೂರ ಓಣಿಯ ಶ್ರೀಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ ನನಗೆ ಸಂತಸವಿದೆ. ಪ್ರತಿ ಪಂಚಾಯತ ಮಟ್ಟದಲ್ಲಿ ಆತ್ಮಾವಲೋಕನ ಸಭೆ ನಡೆಸುತ್ತೇನೆ. ಅನೇಕ ವಿರೋಧಗಳ ನಡುವೆಯೂ ನಾಲ್ಕು ಬಾರಿ ಆಯ್ಕೆಯಾಗಿ ಬಂದಿದ್ದೇನೆ. ರಾಜಕೀಯ ಜೀವನದಲ್ಲಿ ನನಗೆ ಇದೊಂದು ಸವಾಲಾಗಿತ್ತು.
ಇದರಿಂದ ನಾನು ಪಾಠ ಕಲಿತೆ. ಇಲ್ಲಿ ಯಾರೂ ಶತ್ರುಗಳಲ್ಲ. ಲಂಬಾಣಿ ಮತ್ತು ಭೋವಿ ಸಮಾಜದ ಗೊಂದಲ, ಅಕ್ಕಿ ವಿತರಣೆಯಲ್ಲಿ ಕಡಿಮೆ ಮಾಡಿರುವುದು ಮತ್ತು ಗ್ಯಾರಂಟಿ ಕಾರ್ಡ್ನಿಂದಾಗಿ ನಾವು ಆಡಳಿತ ಪಕ್ಷದ ವಿರೋಧಿ ಅಲೆಗೆ ಸಿಲುಕಬೇಕಾಯಿತು ಎಂದರು. ಕ್ಷೇತ್ರಕ್ಕಾಗಿ ಸರ್ಕಾರದಿಂದ ಅಭಿವೃದ್ಧಿ ಕೇಳುವುದು ನನ್ನ ಹಕ್ಕು. ಈ ಹಿಂದೆ ವಿರೋಧ ಪಕ್ಷದವರ ಕೆಲಸ ಮಾಡಿ ಕೊಟ್ಟಿದ್ದೇನೆ. ಅದೇ ರೀತಿ ಅವರಿಂದ ಕೆಲಸ ಪಡೆಯುತ್ತೇನೆ. ಬದಲಾವಣೆ ಮನುಷ್ಯನ ಸಹಜ ಪ್ರಕ್ರಿಯೆ. ಅದೇ ಕಾರಣದಿಂದ ಚುನಾವಣೆಗಳು ನಡೆಯುತ್ತವೆ ಎಂದರು.
ಜಿ.ಪಂ.ಮಾಜಿ ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿ ಬನವಾಸಿ ಭಾಗದ ಮತದಾರರ ಆಶೀರ್ವಾದದಿಂದ ಶಿವರಾಮ ಹೆಬ್ಬಾರ ಆಯ್ಕೆಯಾದರು. ಕ್ಷೇತ್ರ ಕಾಯ್ದುಕೊಳ್ಳಲು ಆಗದಿದ್ದರೆ ಮುಖಂಡತ್ವ ಯಾಕೆ ವಹಿಸಬೇಕು? ಪಟ್ಟಣದಲ್ಲಿ ಮುಖಂಡರ ಬದಲಾವಣೆ ಆಗಬೇಕು ಎಂದರು. ಮುಖಂಡ ಉಮೇಶ ಬಿಜಾಪುರ ಮಾತನಾಡಿ ಪಟ್ಟಣದಲ್ಲಿ ಎಲ್ಲೂ ಮತಗಳು ತೀರಾ ಕಡಿಮೆ ಬಂದಿಲ್ಲ. ಒಂದೇ ಸಮಾಜದವರು ಇದ್ದ ಕಾರಣದಿಂದ 2600 ಮತಗಳು ಕಡಿಮೆ ಬಂದಿವೆ. ತಪ್ಪು ಅಭಿಪ್ರಾಯ ಬೇಡ ಎಂದರು.
ಬಸವರಾಜ ಟನಕೇದಾರ ಮಾತನಾಡಿ ನಿಷ್ಠಾವಂತ ಕಾರ್ಯಕರ್ತರತ್ತ ಬೆರಳು ಮಾಡಿ ತೋರಿಸುವುದು ಬೇಡ. ನೀವು ಮಾಡಿದ ತಪ್ಪಿಗೆ ನಮ್ಮನ್ನು ಬಲಿಪಶು ಮಾಡಬೇಡಿರಿ. ನಾವು ನಿಯತ್ತಿನಿಂದ ಕೆಲಸ ಮಾಡಿದ್ದೇವೆ ಮತ್ತು ಸಾಬೀತು ಕೂಡ ಮಾಡುತ್ತೇವೆ. ನಮ್ಮ ಜೊತೆಗೇ ಇದ್ದು ಬೇರೆ ಪಕ್ಷಕ್ಕೆ ಓಟು ಹಾಕಿಸಿ ತಪ್ಪು ಮಾಡಿದ್ದಕ್ಕೆ ಮತಗಳ ಅಂತರ ಕಡಿಮೆಯಾಯಿತು ಎಂದರು. ಮುಖಂಡ ಗುಡ್ಡಪ್ಪ ಕಾತೂರ ಮಾತನಾಡಿ ಪಕ್ಷದಲ್ಲಿದ್ದು ಆತ್ಮವಂಚನೆ ಮಾಡಿಕೊಂಡು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದವರು ಪಕ್ಷ ಬಿಟ್ಟು ಹೋಗಬೇಕು ಎಂದರು.
ಅಶೋಕ ಚಲವಾದಿ, ಜಗದೀಶ ಕುರುಬರ, ಡಿ.ಎಫ್.ಮಡ್ಲಿ, ವೈ.ಪಿ.ಪಾಟೀಲ, ರಾಬರ್ಟ್ ಲೋಬೊ, ಎಫ್.ಡಿ.ಗುಲ್ಯಾನವರ, ಪಿ.ಜಿ.ತಂಗಚ್ಚನ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಶಾಸಕರನ್ನು ಸನ್ಮಾನಿಸಿದರು. ಈ ವೇಳೆ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷ ರಮೇಶ ಕಾಮತ, ನಾಗಭೂಷಣ ಹಾವಣಗಿ, ಪ.ಪಂ.ಉಪಾಧ್ಯಕ್ಷ ಶ್ರೀಕಾಂತ ಸಾನು, ಪರಶುರಾಮ ತಹಶೀಲ್ದಾರ, ಉದಯ ಪಾಲೇಕರ, ಮಂಜುನಾಥ ನಡಿಗೇರ, ರಾಜು ಗುಬ್ಬಕ್ಕನವರ, ನಾಗರಾಜ ಸಂಕನಾಳ, ಗೀತಾ ಯಲ್ಲಾಪುರ, ವಿಠ್ಠಲ ಬಾಳಂಬೀಡ, ಸಂತೋಷ ತಳವಾರ, ಗುರುರಾಜ ಕಾಮತ, ಬಾಬುರಾವ ವಾಲ್ಮೀಕಿ, ಪ.ಪಂ.ಸದಸ್ಯರು ಹಾಗೂ ಮುಂತಾದವರು ಇದ್ದರು.