ಕಾರವಾರ: ಇತಿಹಾಸದಲ್ಲೇ ಪ್ರಧಾನಿಯೊಬ್ಬರು ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಕಾರ್ಯ ನಡೆಸಲು ಮುಂದಾಗಿದ್ದಾರೆ. ಮೇ 3ರಂದು ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರವನ್ನು ಉದ್ದೇಶಿಸಿ ಪ್ರಚಾರವನ್ನು ಅಂಕೋಲಾ ತಾಲೂಕಿನ ಹಟ್ಟಿಕೇರಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ನೌಕಾನೆಲೆಯ ಜಮೀನಿನಲ್ಲಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಗಮದ ಕಾರಣದಿಂದ ಭದ್ರತಾ ಪಡೆಗಳು ಕಳೆದ ಒಂದು ವಾರದಿಂದ ಜಿಲ್ಲೆಯ ವಿವಿಧ ಕಡೆ ಬೀಡು ಬಿಟ್ಟಿವೆ. ಸಮುದ್ರ, ರಸ್ತೆ ಮಾರ್ಗದಲ್ಲಿ ಭದ್ರತೆಗಳನ್ನು ಹೆಚ್ಚಿಸಲಾಗಿದೆ. ಸಮುದ್ರದಿಂದ ಬರುವ ಎಲ್ಲ ಬೋಟುಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಅದರಂತೆ ಅಂಕೋಲಾಕ್ಕೆ ಬರಲಿರುವ ಮೋದಿ ಅವರ ಸ್ವಾಗತಕ್ಕೆ ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗಿದೆ.
ದಕ್ಷಿಣ ಕನ್ನಡಕ್ಕೆ ಮೊದಲ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಬಳಿಕ 12 ಗಂಟೆಗೆ ಸರಿಯಾಗಿ ಅಂಕೋಲಾಕ್ಕೆ ಆಗಮಿಸಲಿದ್ದಾರೆ. ಸಮಾವೇಶದ ಹಿಂಭಾಗದಲ್ಲಿಯೇ ಹೆಲಿಪ್ಯಾಡ್ ವ್ಯವಸ್ಥೆ ಮಾಡಿದ್ದು ರಾಜ್ಯ ನಾಯಕರ ಪೈಕಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗಮಿಸಲಿದ್ದಾರೆ.
ಉಳಿದಂತೆ ಜಿಲ್ಲೆಯ ಎಲ್ಲ ಬಿಜೆಪಿ ಅಭ್ಯರ್ಥಿಗಳು ಉಪಸ್ಥಿತರಿದ್ದು ಪ್ರಚಾರ ಸಭೆಯಲ್ಲಿ ಮೊದಲು ಮಾತನಾಡಲಿದ್ದಾರೆ ಎಂದು ಸಚಿವರ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
ಸಮಾವೇಶಕ್ಕಾಗಿ ವೇದಿಕೆ, ಆಸನ, ವಿಐಪಿಗೆ, ವಿವಿಐಪಿ ಜನಸಾಮಾನ್ಯರಿಗೆ ಪ್ರತ್ಯೇಕ ಗ್ಯಾಲರಿ ಮೂಲಕ ಆಸನ ವ್ಯವಸ್ಥೆ ಮಾಡಲಾಗಿದ್ದು, ಸಮಾವೇಶಕ್ಕೆ ಪ್ರವೇಶ ಪಡೆಯುವವರನ್ನು ಹಲವು ಹಂತಗಳಲ್ಲಿ ತಪಾಸಣೆ ನಡೆಸಿ ಒಳಗೆ ಬಿಡಲಾಗುತ್ತಿದೆ. ಸುಮಾರು 3 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ ಎಂದರು.
ಪ್ರಧಾನಿ ನರೇಂದ್ರ ಮೋದಿಗೆ ಉತ್ತರಕನ್ನಡ ಜಿಲ್ಲೆಯ ವಿಶೇಷವಾದ ಇಡಗುಂಜಿಯ ಮಹಾಗಣಪತಿ ವಿಗ್ರಹ, ಶಿರಸಿಯಲ್ಲಿ ತಯಾರಿಸುವ ಗಂಧದ ಹಾರ, ಹಾಗೂ ವಿಶೇಷ ಕಿರೀಟ ತೊಡಿಸಲಾಗುತ್ತಿದೆ. ಅಲ್ಲದೆ ಪ್ರಧಾನ ಮಂತ್ರಿಯೊಂದಿಗೆ ಆಗಮಿಸುತ್ತಿರುವ ಸುಮಾರು 50 ಜನರ ತಂಡಕ್ಕೆ ಕ್ಷೇತ್ರದ ವಿಶೇಷವಾದ ಕರಿ ಇಶಾಡು, ಆಪೂಸ್ ಮಾವು, ಕೆಂಪು ಸೊಪ್ಪಿನ ಬಾಜಿ, ರವೆ ಪಾಯಸ, ಹಾಗೂ ರವೆ ಕರ್ಜೂರ ಸ್ವೀಟ್ ಸೇರಿದಂತೆ ಇನ್ನಿತರ ತಿಂಡಿಯೊAದಿಗೆ ಊಟದ ವ್ಯವಸ್ಥೆ ಮಾಡಿರುವುದಾಗಿ ಶಾಸಕಿ ರೂಪಾಲಿ ನಾಯ್ಕ ತಿಳಿಸಿದರು.
ಅಂಕೋಲಾದ ಹಟ್ಟಿಕೇರಿಯಲ್ಲಿ ಕೈಗೊಂಡಿದ್ದ ವ್ಯವಸ್ಥೆಯನ್ನು ಕಾರ್ಮಿಕ ಇಲಾಖೆ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರಧಾನ ನರೇಂದ್ರ ಮೋದಿ ಅವರು ಸಮಾವೇಶಕ್ಕೆ ಮೂರು ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ. ಮೋದಿ ಅವರ ಆಗಮನ ಜಿಲ್ಲೆಯ ಆರೂ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ಮೂಡಿಸಿದೆ.
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆಯ ಅವಕಾಶ ಆಗಬಾರದು. ಸ್ವತಂತ್ರ ಬಿಜೆಪಿ ಸರಕಾರ ರಚನೆ ಗುರಿಯಾಗಿದೆ. ಇದಕ್ಕಾಗಿ ಮೋದಿ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಸದೃಢವಾಗಿದೆ. ನರೇಂದ್ರ ಮೋದಿ ಪ್ರಚಾರ ಕಾರ್ಯಕ್ಕೆ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಲಿದ್ದು ಪಕ್ಷ ಅವರ ಅದ್ದೂರಿ ಸ್ವಾಗತಕ್ಕೆ ಸಜ್ಜುಗೊಂಡಿದೆ. ಕಾರ್ಯಕರ್ತರಷ್ಟೆ ಅಲ್ಲದೆ ಅಲ್ಲದೆ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪಕ್ಷದ ಆರು ಅಭ್ಯರ್ಥಿಗಳು, ಬಿಜೆಪಿ ಮುಖಂಡರು ಸೇರಿ 17 ಮಂದಿ ವೇದಿಕೆ ಹತ್ತಲಿದ್ದಾರೆ ಎಂದರು.
ಈಗಾಗಲೇ ಬಿಜೆಪಿ ಕೂಡ ಪ್ರನಾಳಿಕೆ ಬಿಡುಗಡೆಗೊಳಿಸಿದ್ದು, ಆರಕ್ಕೆ ಆರು ಕ್ಷೇತ್ರ ಗೆಲ್ಲುವುದರ ಜತೆಗೆ ರಾಜ್ಯದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರಲಿದ್ದೇವೆ. ಈ ಸಮಾವೇಶಕ್ಕೆ ಜಿಲ್ಲೆ ಯಿಂದ 2 ರಿಂದ 3 ಲಕ್ಷಕ್ಕೂ ಅಧಿಕ ಜನರು ಆಗಮಿಸಲಿದ್ದಾರೆ. ಕಾಂಗ್ರೆಸ್ನ ಒಳ ಜಗಳದಿಂದಾಗಿ ಮತದಾರರು ವಿಚಲಿತರಾಗಿದ್ದಾರೆ. ಮತ್ತೆ ಅವರು ಅಧಿಕಾರದ ಕನಸು ಕಾಣುವುದು ಬಿಟ್ಟು ಬಿಡಲಿ. ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೆ ನಮ್ಮ ಪಕ್ಷ ರಾಜ್ಯದಲ್ಲಿ ಆಡಳಿತ ಮಾಡುವುದರೊಂದಿಗೆ ಉತ್ತಮ ಕೊಡುಗೆ ನೀಡಲಿದೆ. ಇಲ್ಲಿಯ ಜನರ ಕಷ್ಟ ಸುಖಗಳ ಬಗ್ಗೆ ಅರಿತಿರುವ ನಮ್ಮ ಪಕ್ಷ ಸಾಮಾಜಿಕ ನ್ಯಾಯ ಒದಗಿಸಿದೆ ಎಂದರು.