ಕಾರವಾರ: ಉದ್ದೇಶಿತ ನಾಗರಿಕ ವಿಮಾನ ನಿಲ್ದಾಣ ಯೋಜನೆಗೆ ನಿಗದಿ ಪಡಿಸಿದ ಭೂಮಿಗೆ ಮತ್ತೆ ಹೆಚ್ಚುವರಿಯಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸರ್ವೇ ಕಾರ್ಯಕ್ಕೆ ಆಗಮಿಸಿದ್ದ ಅಧಿಕಾರಿಗಳ ತಂಡಕ್ಕೆ ಸ್ಥಳೀಯರಿಂದ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ವೇ ಕಾರ್ಯವನ್ನು ತಾತ್ಕಾಲಿಕವಾಗಿ ಕೈಬಿಟ್ಟು ಮರಳಿದ ಘಟನೆ ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ನಡೆದಿದೆ. ಅಲಗೇರಿಯಲ್ಲಿನ ಉದ್ದೇಶಿತ ವಿಮಾನ ನಿಲ್ದಾಣ ಯೋಜನೆಗೆ ಈಗಾಗಲೇ ಸುಮಾರು 87 ಎಕರೆ 18 ಗುಂಟೆಗಳಷ್ಟು ಜಮೀನು ಗುರುತಿಸಿ ಸರ್ವೇ ನಡೆಸಲಾಗಿದ್ದು, ನೋಟಿಫಿಕೇಶನ್ ಕಾರ್ಯ ಪ್ರಗತಿಯಲ್ಲಿದ್ದು ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಂಡಿದೆ.
ಈ ನಡುವೆ ಹೆಚ್ಚುವರಿಯಾಗಿ ಮತ್ತೆ 6 ಎಕರೆ 8 ಗುಂಟೆಯಷ್ಟು ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳುವ ದೃಷ್ಟಿಯಿಂದ ಕುಮಟಾ ಸಹಾಯಕ ಆಯುಕ್ತರ ಕಚೇರಿಯಿಂದ ಭೂ ಸ್ವಾಧೀನ ಅಧಿಕಾರಿಗಳ ಪರವಾಗಿ ಶಶಿಧರ, ಅಂಕೋಲಾ ತಾಲೂಕಿನ ಸರ್ವೇ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಗೂ ಸಂಬಂಧಿತ ಸಿಬ್ಬಂದಿಗಳನ್ನೊಳಗೊಂಡ ತಂಡ ಸರ್ವೇ ಕಾರ್ಯಕ್ಕಾಗಿ ಅಲಗೇರಿಗೆ ಆಗಮಿಸಿದ್ದರು. ಇದೇ ವೇಳೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಹೀಗೆ ಏಕಾ ಏಕಿ ನಮ್ಮ ಮಾಲ್ಕಿ ಹಕ್ಕಿನ ಜಾಗಗಗಳಲ್ಲಿ ಸರ್ವೇ ಕಾರ್ಯ ನಡೆಸಬಾರದು.
ಈಗಾಗಲೇ ನಾನಾ ಯೋಜನೆಗಳಿಂದ ನಿರಾಶ್ರಿತರಾದವರಿಗೆ ಯೋಗ್ಯ ಪರಿಹಾರ ದೊರೆತಿಲ್ಲ. ಉದ್ದೇಶಿತ ವಿಮಾನಯಾನ ಯೋಜನೆಗೊ ಸ್ಥಳೀಯರ ವಿರೋಧದ ನಡುವೆಯೂ ಯೋಜನೆ ಜಾರಿಗೆ ತರಲಾಗುತ್ತಿದೆ. ಇಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ನೀಡುವ ಪರಿಹಾರದ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರವರ್ಗ ಈ ವರೆಗೂ ನಮಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇಲ್ಲಿ ಬಂದು ಪರಿಹಾರದ ಕುರಿತು ನಮಗೆ ಮನವರಿಕೆ ಮಾಡಿಕೊಡಲಿ.
ಅಲ್ಲಿವರೆಗೂ ಯಾವುದೇ ಹೊಸ ಸರ್ವೆ ಕಾರ್ಯ ಆರಂಭಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಮಧ್ಯಾಹ್ನದ ಹೊತ್ತಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳ ಬಿಟ್ಟು ವಾಪಸ್ ತೆರಳಿದ್ದರು. ಊಟದ ಬಳಿಕ ಮತ್ತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬರುತ್ತಿದ್ದಂತೆ ಸ್ಥಳೀಯರು, ಮಹಿಳೆಯರು, ರೈತರು ಸೇರಿ ಸರ್ವೆ ಕಾರ್ಯ ನಡೆಸಿದಂತೆ ಆಗ್ರಹಿಸಿ ಸ್ಥಳದಲ್ಲಿಯೇ ಧರಣಿ ಕುಳಿತರು. ಈ ವೇಳೆ ಅಧಿಕಾರಿಗಳು ಹಾಗೂ ಸ್ಥಳೀಯರ ಮದ್ಯೆ ಬಿಸಿಯೇರಿದ ಮಾತುಕತೆ ನಡೆಯಿತು. ನಂತರ ವಾತಾವರಣ ತಿಳಿದುಕೊಂಡು ತಾತ್ಕಾಲಿಕವಾಗಿ ಸರ್ವೆ ಕಾರ್ಯ ಕೈ ಬಿಟ್ಟ ತಹಶೀಲ್ದಾರ ಪ್ರವೀಣ ಎಚ್. ಮತ್ತಿತರ ಅಧಿಕಾರಿಗಳಿದ್ದ ತಂಡ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ಥಳೀಯರನ್ನು ಸಮಾಧಾನಪಡಿಸಿ ವಾಪಸಾಯಿತು.
ಪೊಲೀಸ್ ನಿರೀಕ್ಷಕ ಜಾಕ್ಸನ್ ಡಿಸೋಜ, ಪಿ.ಎಸ್.ಐಗಳಾದ ಕುಮಾರ ಕಾಂಬಳೆ, ಮಹಾಂತೇಶ ವಾಲ್ಮೀಕಿ, ಗೀತಾ ಶಿರ್ಶಿಕರ ಮತ್ತು ಅಂಕೋಲಾ ಠಾಣಾ ಸಿಬ್ಬಂದಿಗಳು ಮತ್ತು ಹೆಚ್ಚುವರಿ ಪೋಲೀಸ್ ತುಕಡಿ ಸ್ಥಳದಲ್ಲಿ ಹಾಜರಿದ್ದು ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸುರೇಶ ನಾಯಕ ಅಲಗೇರಿ, ನಿತ್ಯಾನಂದ ಟಿ ನಾಯಕ, ಗೌರೀಶ ನಾಯಕ, ಲಕ್ಷ್ಮಣ ನಾಯಕ, ವಿನೋದ ಗಾಂವಕರ, ಶಿವಾನಂದ ನಾಯ್ಕ, ಸ್ಥಳೀಯ ಗ್ರಾಪಂನ ಕೆಲ ಹಾಲಿ ಹಾಗೂ ಮಾಜಿ ಸದಸ್ಯರು, ಸ್ಥಳೀಯ ನಿವಾಸಿಗಳು ಇನ್ನಿತರಿದ್ದರು.