ಕಾರವಾರ: ಮುಂಡಗೋಡ ತಾಲೂಕಿನ ನ್ಯಾಸರ್ಗಿ ಐಟಿಐ ಕಾಲೇಜಿನ ಉಪನ್ಯಾಸಕರೋರ್ವರು ವಿದ್ಯಾರ್ಥಿಗಳಿಂದ ವಿವಿಧ ಕಾರಣಕ್ಕಾಗಿ ಹಣ ವಸೂಲಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಉಪನ್ಯಾಸಕ ರವಿ ಭಜಂತ್ರಿ ಎನ್ನುವವರು ವಿದ್ಯಾರ್ಥಿಗಳಿಂದ ಸಮವಸ್ತ್ರ ಹಾಗೂ ಪುಸ್ತಕಗಳನ್ನು ನೀಡುವುದಾಗಿ 3000ರೂ. ಹಣ ವಸೂಲಿ ಮಾಡಿದ್ದಾರೆ. ಶಿರಸಿಗೆ ಪರೀಕ್ಷೆ ಬರೆಯಲು ಹೋದ ವಿದ್ಯಾಥಿಗಳಿಂದ 500ರೂ. ಹಣ ಹಾಗೂ ವಿದ್ಯಾರ್ಥಿಗಳು ಗೈರಾಗಿದ್ದರೆ ಅಂಥಹ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಈ ಆಯುಕ್ತರಿಗೆ ದೂರು ಸಲ್ಲಿಸಿದ್ದರು.
ಆಯುಕ್ತರ ಸೂಚನೆ ಮೇರೆಗೆ ಬೆಳಗಾವಿ ಜಂಟಿ ನಿರ್ದೇಶಕರು ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಹಾಗೂ ಅಲ್ಲಿನ ಪ್ರಾಂಶುಪಾಲರಿಂದ ಮಾಹಿತಿ ಪಡೆದುಕೊಂಡು ಆಯುಕ್ತರಿಗೆ ವರದಿ ಮಾಡಿದ್ದಾರೆ.
ಈ ಬಗ್ಗೆ ತಕ್ಷಣ ಗ್ರಾಮಸ್ಥರು ಐಟಿಐ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಪ್ರಾಂಶುಪಾಲ ರವಿ ಕಮಡೊಳ್ಳಿ ಅವರನ್ನು ಭೇಟಿಯಾಗಿ ಚರ್ಚಿಸಿದರು.
ನಂತರ ಆಪಾದನೆಗೊಳಗಾದ ಉಪನ್ಯಾಸಕ ರವಿ ಭಜಂತ್ರಿ ಅವರನ್ನು ಕರಿಸಿ ವಿಚಾರಿಸಲಾಯಿತು. ಆ ವೇಳೆ ಉಪನ್ಯಾಸಕ ತನ್ನ ತಪ್ಪನ್ನು ಒಪ್ಪಿಕೊಂಡು ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.