ಚಿಕ್ಕಮಗಳೂರು: ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಹೆಚ್ಚು ಪ್ರಾಬಲ್ಯ ಹೊಂದಿದೆ. ಈ ಬಾರಿ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದರೂ ಸುಲಭದ ಗೆಲುವು ಖಚಿತ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅವಧಿ ಮುಗಿದ ಹಿನ್ನೆಲೆಯಲ್ಲಿ ಈಗಾಗಲೇ ಮೇಲ್ಮನೆ ಚುನಾವಣೆ ಘೋಷಣೆ ಆಗಿದೆ. ಅಭ್ಯರ್ಥಿ ಆಯ್ಕೆಗೆ ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚೆಗಳು ನಡೆಯುತ್ತಿದೆ. ತಾವು 6 ವರ್ಷಗಳ ಕಾಲ ಪರಿಷತ್ತನ್ನು ಪ್ರತಿನಿಧಿಸಿದ್ದೇವೆ. ಈ ಬಾರಿ ಚುನಾವಣೆಯಲ್ಲಿ ಪಕ್ಷ ಯಾವ ತೀರ್ಮಾನ ಮಾಡುತ್ತದೆ ಅದಕ್ಕೆ ಬದ್ಧನಾಗಿರುತ್ತೇನೆ ಎಂದರು.
ತಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಹಿಂದೆಯೂ ನಮ್ಮನ್ನು ಕರೆದು ಸ್ಪರ್ಧೆ ಮಾಡಬೇಕು ಎಂದು ಸೂಚಿಸಿದಾಗ ಅದಕ್ಕೆ ಒಪ್ಪಿ ನಡೆದುಕೊಂಡಿದ್ದೇನೆ. ಈಗಲೂ ಸ್ಪರ್ಧಿಸಲು ಹೇಳಿದರೆ ಅದಕ್ಕೆ ಸಿದ್ಧನಿದ್ದೇನೆ. ಇಲ್ಲ ಬೇರೆವರಿಗೆ ಅವಕಾಶ ಮಾಡಿಕೊಟ್ಟು ಅವರ ಪರ ಕೆಲಸ ಮಾಡಬೇಕು ಎಂದರೆ ಅದಕ್ಕೂ ಸಿದ್ಧನಿದ್ದೇನೆ ಎಂದು ಹೇಳಿದರು.
ಅದಕ್ಕಾಗಿ ಇಂದು ಪೂರ್ವಭಾವಿ ಸಭೆಯನ್ನೂ ಕರೆಯಲಾಗಿದೆ. ಕಾರ್ಯಕರ್ತರ ಬಲದ ಮೇಲೆ ನಾವು ಈ ಚುನಾವಣೆಯನ್ನು ಖಂಡಿತವಾಗಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.
ವಿಧಾನ ಪರಿಷತ್ ಕ್ಷೇತ್ರದ ಇತಿಮಿತಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದ ಆತ್ಮ ತೃಪ್ತಿ ನನಗಿದೆ. ಇದರ ನಡುವೆಯೂ ಹಲವು ಸಮಸ್ಯೆಗಳು ನಮ್ಮ ಜಿಲ್ಲೆಯಲ್ಲಿವೆ. ಅವುಗಳನ್ನು ಪರಿಪೂರ್ಣವಾಗಿ ಪರಿಹಾರ ಮಾಡಲು ಆಗಿದೆ ಎಂದು ಹೇಳುವುದಿಲ್ಲ. ವಿಧಾನ ಪರಿಷತ್ತಿಗೆ ಒಂದು ಇತಿ ಮಿತಿ ಇದೆ. ಅದರ ಚೌಕಟ್ಟಿನಲ್ಲೇ ಕೆಲಸ ಮಾಡಬೇಕಿದೆ. ಅದನ್ನು ಮೀರಿ ಕೆಲಸ ಮಾಡಲು ಸದಸ್ಯರಿಗೆ ಅವಕಾಶವಿರುವುದಿಲ್ಲ. ಸರ್ಕಾರಕ್ಕೆ ಸಲಹೆಗಳನ್ನು ಮಾಡಬಹುದೇ ವಿನಹ ಅದನ್ನು ಕಾರ್ಯಗತಗೊಳಿಸುವ ಅಧಿಕಾರ ಪರಿಷತ್ತಿಗೆ ಇರುವುದಿಲ್ಲ ಆದರೂ ನಮ್ಮನ್ನು ಆಯ್ಕೆ ಮಾಡಿದ ಎಲ್ಲಾ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದರು.
ಕಾಂಗ್ರೆಸ್-ಜೆಡಿಎಸ್ನಿಂದ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕುವುದುದು, ಬಿಡುವುದು ಆ ಪಕ್ಷಗಳಿಗೆ ಬಿಟ್ಟ ವಿಚಾರ. ಬಿಜೆಪಿ ಮಾತ್ರ ಎಲ್ಲಾ ಪಕ್ಷಗಳನ್ನೂ ಗಂಭೀರವಾಗಿ ಪರಿಗಣಿಸುತ್ತದೆ. ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ನಮ್ಮ ಪಕ್ಷ ಈಗಾಗಲೇ ಆರಂಭಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗ್ರಾಮ ಪಂಚಾಯ್ತಿಗಳಲ್ಲಿ ಎಲ್ಲಾ ಪಕ್ಷಗಳಿಗಿಂತ ಹೆಚ್ಚಾಗಿ ಬಿಜೆಪಿ ಬೆಂಬಲಿಗರು ಗೆದ್ದುಬಂದಿದ್ದಾರೆ. ಸಂಖ್ಯೆ ಆಧಾರದಲ್ಲಿ ಈ ಬಾರಿ ಚುನಾವಣೆ ನಮಗೆ ಸುಲಭ ಎಂದು ಕಾಣುತ್ತಿದೆ. ಆದರೂ ಯಾರೇ ಅಭ್ಯರ್ಥಿಯಾದರೂ ಗಂಭೀರವಾಗಿ ತೆಗೆದುಕೊಂಡು ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಬಿಟ್ ಕಾಯಿನ್ ವಿಚಾರದಲ್ಲಿ ರಾಜಕೀಯ ಉದ್ದೇಶಕ್ಕಾಗಿ ಇಂದು ಅಧಿಕಾರದಲ್ಲಿರುವವರ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳು ನಡೆದಿದೆ. ಆದರೆ ಇದೆಲ್ಲವೂ ತನಿಖೆ ಯಿಂದ ಮಾತ್ರ ಹೊರ ಬರಬೇಕಿದೆ. ಈಗ ಕೇವಲ ರಾಜಕೀಯ ದುರುದ್ದೇಶಗಳಿಂದ ಬೇರೆ ಬೇರೆ ವಿಚಾರಗಳನ್ನು ಪ್ರಸ್ತಾಪ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನಮ್ಮ ಮುಖ್ಯಮಂತ್ರಿಗಳು ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಅತ್ಯಂತ ಯೋಗ್ಯ ಸಿಎಂ ಅವರಾಗಿದ್ದಾರೆ. ಇಂತಹ ವ್ಯವಹಾರಗಳಿಗೆಲ್ಲ ಅವರು ಕೈಹಾಕುವವರಲ್ಲ. ಅಂತಹ ವಿಚಾರಗಳೇನಾದರೂ ಹರಿಯ ಬಿಡುತ್ತಿದ್ದರೆ ಅದು ಕೇವಲ ಊಹಾಪೋಹ ಮಾತ್ರ ಎಂದು ತಿಳಿಸಿದರು.