ಚಿಕ್ಕಮಗಳೂರು: ಇತ್ತೀಚೆಗೆ ಕೇರಳದಲ್ಲಿ ಎಟಿಎಸ್(ಭಯೋತ್ಪಾದನೆ ನಿಗ್ರಹ ದಳ)ದಿಂದ ಬಂದಿಸಲ್ಪಟ್ಟಿದ್ದ ನಕ್ಸಲ್ ನಾಯಕ ಶೃಂಗೇರಿಯ ಬಿ.ಜಿ.ಕೃಷ್ಣಮೂರ್ತಿಯನ್ನು ಗುರುವಾರ ಪೊಲೀಸರು ನ.ರಾ.ಪುರ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆತನನ್ನು ನಾಲ್ಕು ದಿನಗಳ ಕಾಲ ಶೃಂಗೇರಿ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.
ಇತ್ತೀಚೆಗೆ ಕೇರಳದ ವಯನಾಡಿನ ಸುಲ್ತಾನ್ ಬತೇರಿಯಲ್ಲಿ ಎಟಿಎಸ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಆತನನ್ನು ಶೃಂಗೇರಿ ಪೊಲೀಸರು ಇಲ್ಲಿಗೆ ಕರೆತಂದಿದ್ದಾರೆ. ಆತನನ್ನು ಶೃಂಗೇರಿ ನ್ಯಾಯಾಲಯದ ಎದುರು ಹಾಜರುಪಡಿಸಬೇಕಿತ್ತು ಆದರೆ ಅಲ್ಲಿ ನ್ಯಾಯಾಧೀಶರು ರಜೆಯಲ್ಲಿದ್ದ ಕಾರಣ ನ.ರಾ.ಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಕಾರ್ಕಳದ ನಕ್ಸಲ್ ನಿಗ್ರಹ ಪಡೆ ಪೊಲೀಸರ ಬಿಗಿ ಪಹರೆಯೊಂದಿಗೆ ಮಧ್ಯಾಹ್ನ ೧೨.೧೫ ರ ವೇಳೆಗೆ ಆತನನ್ನು ನ್ಯಾಯಾಲಯಕ್ಕೆ ಕರೆತರಲಾಯಿತು. ಈ ವೇಳೆ ಕೃಷ್ಣಮೂರ್ತಿ ತನ್ನ ಪರವಾಗಿ ತಾನೇ ವಾದ ಮಂಡಿಸಿದ್ದು, ಪೊಲೀರು ನನಗೆ ಆರೋಗ್ಯ ತಪಾಸಣೆ ಮಾಡಿಸಿಲ್ಲ ಎಂದು ನ್ಯಾಯಾಧೀಶರೆದುರು ಆಕ್ಷೇಪಿಸಿದ್ದಾನೆ.
ಆತನನ್ನು ೧೫ ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಬೇಕು ಎಂದು ಸರ್ಕಾರಿ ಅಭಿಯೋಜಕಿ ಹರಿಣಾಕ್ಷಿ ನ್ಯಾಯಾಲಯವನ್ನು ಕೋರಿದರು. ಅದಕ್ಕೂ ಕೃಷ್ಣಮೂರ್ತಿ ಆಕ್ಷೇಪಿಸಿದ್ದು, ಅಂತಿಮವಾಗಿ ನ್ಯಾಯಾಧೀಶರು ೪ ದಿನಗಳ ಆತನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ವಿಚಾರಣೆ ವೇಳೆ ಜಿಲ್ಲೆಯಲ್ಲಿ ತಮ್ಮ ಮೇಲೆ ಎಷ್ಟು ಪ್ರಕರಣಗಳಿವೆ ಎನ್ನುವುದು ಮಾಹಿತಿ ಇಲ್ಲ. ಪೊಲೀಸರು ಮಾಹಿತಿ ನೀಡುತ್ತಿಲ್ಲ ಎಂದಾಗ ಅವು ಸಾರ್ವಜನಿಕ ದಾಖಲೆಗಳಾಗಿರುತ್ತವೆ. ಮಾಹಿತಿ ಹಕ್ಕಿನಡಿ ಪಡೆದುಕೊಳ್ಳಬಹುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ ಎನ್ನಲಾಗಿದೆ.
ಹಲವು ವರ್ಷಗಳ ಕಾಲ ಮಲೆನಾಡಿನ ನೆಮ್ಮದಿ ಕೆಡಿಸಿದ್ದ ಬಿ.ಜಿ.ಕೃಷ್ಣಮೂರ್ತಿ ಮೇಲೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ೨೭ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಕ್ರಮೇಣ ಯುವಕರು ನಕ್ಸಲ್ ಚಳುವಳಿಯಿಂದ ದೂರ ಸರಿದ ಹಿನ್ನೆಲೆಯಲ್ಲಿ ಆತ ನೆಲೆ ಕಂಡುಕೊಳ್ಳಲು ಕೇರಳದತ್ತ ಮುಖಮಾಡಿದ್ದ. ಇತ್ತೀಚೆಗೆ ಆತನನ್ನು ಎಟಿಎಸ್ ಪಡೆ ನಕ್ಸಲ್ ನಾಯಕಿ ಸಾವಿತ್ರಿ ಜೊತೆಗೆ ಬಂಧಿಸಿದ್ದರು.
ನಕ್ಸಲ್ ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಕೃಷ್ಣಮೂರ್ತಿ ೨೦೦೩ ರಿಂದ ಭೂಗತನಾಗಿದ್ದ. ೨೦೦೫ ರಲ್ಲಿ ಸಾಕೇತ್ ರಾಜನ್ ಹತ್ಯೆ ನಂತರ ನಕ್ಸಲ್ ಆಂದೋಲನದಲ್ಲಿ ವಿಭಜನೆಗೊಂಡಿತ್ತು. ಈ ವೇಳೆ ಆತ ಕರ್ನಾಟಕದಲ್ಲಿ ನಾಯಕತ್ವ ವಹಿಸಿಕೊಂಡಿದ್ದ.
ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಮುಗಿಸಿದ ನಂತರ ಎಲ್ಎಲ್ಬಿ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಪಡೆದಿದ್ದ. ೨೦೦೦ರ ಆಸುಪಾಸಿನಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ ಸಂದರ್ಭ ಚುರುಕುಗೊಂಡ ನಕ್ಸಲ್ ಚಟುವಟಿಕೆಗೆ ಸೇರ್ಪಡೆಗೊಂಡ ಬಿ.ಜಿ.ಕೃಷ್ಣಮೂರ್ತಿ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.