ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಹಳ್ಳದ ಗಂಡಿ ಸಮೀಪದ ಚಿಕ್ಕ ಹಳ್ಳದ ಬಳಿ ಇಂದು ಸಂಜೆ ಸುರಿದ ಭಾರಿ ಮಳೆಗೆ ರಸ್ತೆ ಬದಿಯಲ್ಲಿದ್ದಂತಹ ಮರ ಸ್ಕೂಟರ್ ಸವಾರನ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎಂದಿನಂತೆ ಹೋಂ ಸ್ಟೇ ಕೆಲಸಕ್ಕೆ ತೆರಳಲೆಂದು ಮೂಡಿಗೆರೆ ತಾಲೂಕಿನ ಹಳ್ಳದ ಗಂಡಿ ನಿವಾಸಿ ಸುಮಾರು ೫೮ ವರ್ಷದ ವೇಣುಗೋಪಾಲ್ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಇಂದು ಸಂಜೆ ಸುಮಾರು ನಾಲ್ಕು ಗಂಟೆಗೆ ಸುರಿದ ಬಾರಿ ಗಾಳಿ ಮಳೆಗೆ ರಸ್ತೆ ಬದಿಯಲ್ಲಿದ್ದಂತಹ ಮರ ಸ್ಕೂಟರ್ ಸವಾರನ ಮೇಲೆಯೇ ಬಿದ್ದ ಪರಿಣಾಮ ವ್ಯಕ್ತಿಯು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಧಿಕಾರಿಗಳು ಬಿದ್ದಂತಹ ಮರದ ಕೆಳಗೆ ಇರುವಂತಹ ಮೃತ ವ್ಯಕ್ತಿಯ ಶರೀರವನ್ನು ಸ್ಥಳೀಯರ ಸಹಾಯದೊಂದಿಗೆ ಬೇರ್ಪಡಿಸಿ ಪ್ರಕರಣವನ್ನು ದಾಖಲಿಸಿ ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ರವಾನಿಸಿದರು.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಮಾತನಾಡಿ ಮಳೆಗಾಲ ಬಂತಂದರೆ ಮಲೆನಾಡಿನಲ್ಲಿ ರಸ್ತೆ ಬದಿಯಲ್ಲಿರುವಂತಹ ಮರಗಳು ಧರೆಗುರುಳುವುದು ಸಹಜ ಆದರೆ ಇಂತಹ ಸಮಸ್ಯೆಗಳು ಆಗುವುದಕ್ಕಿಂತ ಮುಂಚೆಯೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ರಸ್ತೆ ಬದಿಯಲ್ಲಿರುವಂತಹ ಮರಗಳನ್ನು ಕಡಿಯುವುದರ ಮುಖಾಂತರ ವರ್ಷಪೂರ್ತಿ ಮಳೆಗಾಲದಲ್ಲಿ ತಲೆದೋರುವಂತಹ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಅದಲ್ಲದೆ ಮಳೆಗಾಲದಲ್ಲಿ ಆಗುವಂತಹ ಇಂತಹ ಅನಾಹುತಗಳನ್ನು ಕೂಡ ತಪ್ಪಿಸಬಹುದು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.