ಚಿಕ್ಕಮಗಳೂರು: ಕುಡಿದು ಬಂದು ಆಪರೇಷನ್ ಥಿಯೇಟರ್ನಲ್ಲಿ ಮಲಗಿದ್ದ ವೈದ್ಯನನ್ನು ಬಚಾವ್ ಮಾಡಿಸುವ ಸಲುವಾಗಿ ಸಿಬ್ಬಂದಿ ವಿಷ್ಣುಸೇನಾ ಚಿತ್ರದ ಪಾರ್ಟ್ ೨ ಕಥೆ ಹೆಣೆದ ಘಟನೆ ಚಿಕ್ಕಮಗಳೂರಿನ ಕಳಸ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ ಕ್ಯಾಂಪ್ ಏರ್ಪಾಡು ಮಾಡಿದ್ದು, ಮಹಿಳೆಯರಿಗೆ ಬರಲು ಹೇಳಿದ್ದರು. ಕ್ಯಾಂಪ್ಗೆ ೧೦ಕ್ಕೂ ಹೆಚ್ಚು ಮಹಿಳೆಯರು ತಮ್ಮ ಮಕ್ಕಳನ್ನು ಬಿಟ್ಟು ಬಂದಿದ್ದರು.
ಆಪರೇಷನ್ ಮಾಡುವ ಸಲುವಾಗಿ ಕೊಪ್ಪ ಸರ್ಕಾರಿ ಆಸ್ಪತ್ರೆ ವೈದ್ಯರೊಬ್ಬರು ೩ ಗಂಟೆಗೆ ಬಂದಿದ್ದ. ಬರುತ್ತಲೇ ಫುಲ್ ಟೈಟ್ ಆಗಿದ್ದ ಈತ ಸಂತಾನಹರಣ ಚಿಕಿತ್ಸೆ ಮಾಡಬೇಕಾದ ಆಪರೇಷನ್ ಬೆಡ್ ಮೇಲೆ ಮಲಗಿ ದ್ದಾನೆ. ಇದರಿಂದಾಗಿ ಅನಸ್ತೇಷಿಯಾ ತೆಗೆದುಕೊಂಡು ಮಲಗಿದ್ದ ಮಹಿಳೆಯರು ರೆಬಲ್ ಆಗಿದ್ದಾರೆ.
ಈ ವೇಳೆ ಸಿಬ್ಬಂದಿ ವೈದ್ಯರಿಗೆ ಏನೋ ಆಗಿದೆ. ಶುಗರ್ ಕಡಿಮೆ ಆಗಿದೆ, ಬಿಪಿ ಜಾಸ್ತಿ ಆಗಿದೆ ಎಂದು ವಿಷ್ಣುಸೇನಾ ಚಿತ್ರದ ಪಾರ್ಟ್ ೨ ಸನ್ನಿವೇಶ ಸೃಷ್ಟಿಸಿ ಹೈಡ್ರಾಮಾ ಮಾಡಿದ್ದಾನೆ. ಅಲ್ಲದೇ ವೈದ್ಯರಿಗೆ ಗ್ಲೂಕೋಸ್ ಹಾಕಿಸಿ ವಾಪಸ್ ಕೊಪ್ಪಕ್ಕೆ ಕಳುಹಿಸಲಾಗಿದೆ. ಅನಸ್ತೇಷಿಯಾ ತೆಗೆದುಕೊಂಡು ಮಲಗಿದ್ದ ಮಹಿಳೆಯರಿಗೆ ಆಸ್ಪತ್ರೆ ಸಿಬ್ಬಂದಿ ಗ್ಲೂಕೋಸ್ ಹಾಕಿದ್ದಾರೆ. ಗುರುವಾರ ಮತ್ತೆ ಬೇರೆ ವೈದ್ಯರನ್ನು ಕರೆಸಿ ಆಪರೇಷನ್ ಮಾಡಿಸಲು ಸಿದ್ಧತೆ ನಡೆಸಲಾಗಿದೆ.
ಸಿಬ್ಬಂದಿಗಳ ಈ ವರ್ತನೆಗೆ ಆಸ್ಪತ್ರೆಗೆ ಆಗಮಿಸಿದ್ದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಹಿಡಿ ಶಾಫ ಹಾಕಿದ್ದಾರೆ.
ಸುದ್ದಿ ತಿಳಿದ ಬಳಿಕ ಡಿ.ಹೆಚ್.ಓ ಉಮೇಶ್ ಅವರು ಈ ಕುರಿತು ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ. ವೈದ್ಯನ ಅಮಾನತಿಗೆ ಸಚಿವ ದಿನೇಶ್ ಗುಂಡೂರಾವ್ ಆದೇಶ ನೀಡಿದ್ದು ತಪ್ಪಿತಸ್ಥರ ವಿರುದ್ಧ ವಿಚಾರಣೆಗೆ ಆದೇಶ ನೀಡಿದ್ದಾರೆ.