ಚಿಕ್ಕಮಗಳೂರು: ಮಾಜಿ ಶಾಸಕ ಸಿ.ಟಿ.ರವಿ ಮತ್ತು ಅವರ ಸಂಬಂಧಿಯೊಬ್ಬರ ಕೈಯಲ್ಲಿ ಚಿಕ್ಕಮಗಳೂರು ಕ್ಷೇತ್ರ ಸಿಲುಕಿ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕಗ್ಗೊಲೆಯಾಗಿತ್ತು. ಕ್ಷೇತ್ರ ನಲುಗಿ ಹೋಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ಜಾತ್ಯಾತೀತ ಸಂಘಟನೆಗಳು ಒಗ್ಗೂಡಿ ನನಗೆ ಗೆಲುವು ತಂದುಕೊಟ್ಟಿದ್ದಾರೆ. ಇದು ನನ್ನ ಗೆಲುವಲ್ಲ ಕ್ಷೇತ್ರದ ಜನತೆಯ ಗೆಲುವು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.
ನಗರದ ಭಾರತ ಕಮ್ಯೂನಿಸ್ಟ್ ಪಕ್ಷದ ಕಚೇರಿಗೆ ಭೇಟಿನೀಡಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ಚುನಾವಣೆಯ ಗೆಲುವು ನನ್ನದಲ್ಲ, ಕ್ಷೇತ್ರದ ಜನರು ಅವರನ್ನು ಸೋಲಿಸಿದ್ದಾರೆ. ನಾನು ಸಾಮಾನ್ಯ ರೈತ ಕುಟುಂಬದಿಂದ ಬಂದವನು, ನನ್ನ ತಂದೆ ಡಿ ದರ್ಜೆ ನೌಕರರಾಗಿದ್ದರು. ಜನರು ನನ್ನನ್ನು ಆಯ್ಕೆ ಮಾಡಿದ್ದು, ಅವರ ಸೇವೆ ಮಾಡಿ ಋಣ ತೀರಿಸುತ್ತೇನೆಂದು ಹೇಳಿದರು.
ಮಾಜಿ ಶಾಸಕರು ಕ್ಷೇತ್ರದಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸಿದರು. ಜನರು ಅದಕ್ಕೆ ತಕ್ಕ ಉತ್ತರ ನೀಡಿದರು. ಐದು ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಅನುಭವಿಸಿದೆ ಎಂದ ಅವರು, ನನ್ನ ಕ್ಷೇತ್ರದಲ್ಲಿ ಶಾಂತಿ ಸೌಹಾರ್ದತೆ ಮೂಡಿಸುವುದು ನನ್ನ ಮೊದಲ ಆದ್ಯತೆ, ಜನಸ್ನೇಹಿ ಆಡಳಿತ ನನ್ನ ಮೊದಲ ಆದ್ಯತೆಯಾ ಗಿದೆ ಎಂದರು.
ಸರ್ಕಾರಿ ಕಚೇರಿಗೆ ಯಾರೇ ಹೋದರು ಅವರನ್ನು ಅಧಿಕಾರಿಗಳು ಗೌರವದಿಂದ ಕಾಣಬೇಕು. ಸೌರ್ಜನ್ಯ ಮತ್ತು ತಾಳ್ಮೆಯಿಂದ ಜನರ ಸಮಸ್ಯೆಗಳನ್ನು ಆಲಿಸಿ ಜನರ ಕೆಲಸ ಮಾಡಿಕೊಡುವ ವಾತವರಣ ನಿರ್ಮಾಣವಾಗಬೇಕು. ಜನರ ಸಮಸ್ಯೆಗಳಿಗೆ ಸ್ಪಂಧಿಸಬೇಕು. ಇದು ನನ್ನ ಉದ್ದೇಶವಾಗಿದೆ ಎಂದು ಹೇಳಿದರು.
ಶಾಲಾ ಶಿಕ್ಷಣ ದಿನದಿಂದಲೂ ನಾನು ಕನಕದಾಸರು, ಬುದ್ಧ, ಬಸವ, ಅಂಬೇಡ್ಕರ್ ಅವರ ಪುಸ್ತಕಗಳನ್ನು ಓದಿ ಬೆಳೆದಿದ್ದು, ಮಹಾತ್ಮರು ಶೋಷಿತ ವರ್ಗದ ಪರ ಧ್ವನಿಯಾಗಿದ್ದರು. ನನ್ನ ಅವಧಿಯಲ್ಲಿ ಶೋಷಿತರ ಪರ, ಬಡವರ ಪರ ಕೆಲಸ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ ಅವರು, ಕಂದಾಯ ಭೂಮಿಯನ್ನು ಗುರುತು ಮಾಡಿ ಕನಿಷ್ಟ ೨೦೦ ಎಕರೆ ಗುರುತಿಸಿ ಯಾರಿಗೆ ನಿವೇಶನವಿಲ್ಲ ಅವರನ್ನು ಗುರುತಿಸಿ ನಿವೇಶನ ನೀಡುವಂತೆ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿದ್ದೇನೆ ಎಂದು ತಿಳಿಸಿದರು.
ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಕೆಲವು ವೈದ್ಯರು ಹಣಕ್ಕೆ ಬೇಡಿಕೆ ಇಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದ ಅವರು, ಸರ್ಕಾರಿ ಇಲಾಖೆ ಸಮಿತಿಗಳಿಗೆ ಜಾತ್ಯಾತೀತವಾಗಿ ಸಂಘಟನೆಗಳ ಸದಸ್ಯರನ್ನು ನೇಮಿಸಿ ಅಲ್ಲಿನ ಭ್ರಷ್ಟಚಾರಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡುತ್ತೇನೆಂದು ಹೇಳಿದರು.
ಭಾರತ ಕಮ್ಯೂನಿಸ್ಟ್ ಪಕ್ಷದ ರೇಣುಕಾರಾಧ್ಯ ಮಾತನಾಡಿ, ಮೋದಿ ಅಣತಿಯಂತೆ ಬಿಜೆಪಿ ರಾಜ್ಯ ಸರ್ಕಾರ ನಡೆದುಕೊಂಡಿದ್ದು, ಇದು ಅತ್ಯಂತ ಕೆಟ್ಟ ಸರ್ಕಾರವನ್ನು ಜನರು ಅಧಿಕಾರದಿಂದ ಇಳಿಸಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ ಎಂದರು.
ಚಿಕ್ಕಮಗಳೂರು ಜನರಲ್ಲಿ ಆಡಳಿತ ಪಕ್ಷ ಮತ್ತು ವ್ಯಕ್ತಿ ಮೇಲೆ ಬಾರಿ ಆಕ್ರೋಶ ಹೊಂದಿದ್ದರು. ಇನ್ನೂ ಹೆಚ್ಚಿನ ಅಂತರದ ಗೆಲುವು ಸಿಗಬೇಕಿತ್ತು. ಆದರೆ, ಉಸಿರುಕಟ್ಟಿಸುವ ವಾತವರಣ ಸೃಷ್ಟಿಸಿದರು. ಹಣದ ಹೊಳೆ ಯನ್ನು ಹರಿಸಿದರು. ಜನರು ಯಾವುದಕ್ಕೂ ಮರುಳಾಗದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲುವು ಸಾಧಿಸಿದ್ದಾರೆ. ಜನರನ್ನು ಅಭಿನಂದಿಸುವುದಾಗಿ ತಿಳಿಸಿದರು.
ನೂತನ ಶಾಸಕರಾದ ಎಚ್.ಡಿ.ತಮ್ಮಯ್ಯ ಅವರ ಮೇಲೆ ಬಾರಿ ಜವಾಬ್ದಾರಿ ಇದೆ. ಅಹಂ ಭಾವ ಇಲ್ಲದೆ ಜನರ ಪರ ಕೆಲಸ ಮಾಡುವ ವಿಶ್ವಾಸವಿದೆ ಎಂದ ಅವರು, ನಿವೇಶನ ರಹಿತರು ನಿವೇಶನ ನೀಡಲು ಗಮನಹರಿಸಬೇಕು ಹಾಗೂ ಜನಪರವಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಿಪಿಐ ಮುಖಂಡರಾದ ರಾಧಾಸುಂದರೇಶ್, ಗುಣಶೇಖರ್, ವಿಜಯಕುಮಾರ್, ರಮೇಶ್., ವಸಂತ ಕುಮಾರ ಇದ್ದರು.