ಚಿಕ್ಕಮಗಳೂರು: ಒಡಿಶಾದಲ್ಲಿ ಸಂಭವಿಸಿದ ಶತಮಾನದ ಭೀಕರ ರೈಲು ದುರಂತದಲ್ಲಿ ಬದುಕುಳಿದ ಯಾತ್ರಿಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆಯು ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೇ ನಿಲ್ದಾಣದಲ್ಲಿ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಳಕೋಡು ನಿವಾಸಿಯಾಗಿದ್ದ 61 ವರ್ಷದ ಧರ್ಮಪಾಲಯ್ಯ ಒಡಿಶಾ ರೈಲು ದುರಂತದಲ್ಲಿ ಪಾರಾದ ಕನ್ನಡಿಗರಲ್ಲಿ ಒಬ್ಬರಾಗಿದ್ದರು. ಸುಮೇದ್ ಶಿಖರ್ಜಿಗೆ ಯಾತ್ರೆಗೆಂದು ಹೊರಟಿದ್ದ ಧರ್ಮಪಾಲಯ್ಯ ಅಲ್ಲಿಂದ ವಾಪಸ್ ಮರಳುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಿಂದ ಯಾತ್ರೆಗೆ ತೆರಳಿದ್ದ 100 ಮಂದಿಯ ಪೈಕಿ ಧರ್ಮಪಾಲಯ್ಯ ಕೂಡ ಒಬ್ಬರಾಗಿದ್ದರು. ಧರ್ಮಪಾಲಯ್ಯ ಮೃತದೇಹಕ್ಕಾಗಿ ಮಿರ್ಜಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಉಳಿದ ಯಾತ್ರಾರ್ಥಿಗಳು ಕಾಯುತ್ತಿದ್ದಾರೆ.