ಚಿಕ್ಕಮಗಳೂರು: ನೂರು ವರ್ಷಗಳ ಹೆಚ್ಚು ಕಾಲ ಇತಿಹಾಸವಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾಜಿಕ ಸೇವಾ ಮನೋಭಾವ ಬೆಳೆಸುವಲ್ಲಿ ಸಹಕಾರಿಯಾಗುತ್ತದೆ ಎಂದು ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ ಹೇಳಿದರು.
ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ನಗರದ ಸ್ಕೌಟ್ಸ್ ಭವನದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ
ಬಿ.ಆರ್.ಪಿ., ಬಿ.ಆರ್.ಸಿ ಹಾಗೂ ಸಿಆರ್ಪಿ ಗಳಿಗೆ ಸ್ಕೌಟ್ಸ್ ಅಂಡ್ ಗೈಡ್ಸ್ ಸಾಮಾನ್ಯ ಮಾಹಿತಿ ಮತ್ತು ವಾರ್ಷಿಕ ಕ್ರಿಯಾ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಕ್ಷಕರು ಪಡೆದಿರುವ ತರಬೇತಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಾಕ್ಷಿಯಾಗಬೇಕು, ನಿಮ್ಮ ಶಾಲೆಯ ಮಕ್ಕಳ ವಿಕಾಸದ ಜೊತೆ ರಾಜ್ಯ ಮತ್ತುರಾಷ್ಟ್ರ
ಮಟ್ಟದ ಪ್ರಶಸ್ತಿಗಳನ್ನು ಪಡೆಯುವಂತಹ ವಿದ್ಯಾರ್ಥಿಗಳನ್ನು ತಯಾರು ಮಾಡುವ ಸಾಮರ್ಥ್ಯ ಒಬ್ಬ ಶಿಕ್ಷಕರಲ್ಲಿದ್ದು ಪ್ರತಿಯೊಬ್ಬರು
ನಿಯಮಗಳನ್ನು ಪಾಲಿಸಬೇಕು ಎಂದರು.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಕಡೆಗಳಲ್ಲಿಯೂ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ನೀಡುವ ಮೂಲಕ ಅನೇಕ ಅನುಕೂಲಗಳನ್ನು ಸರಕಾರ
ಮಾಡುವುದರಿಂದ ಶಿಕ್ಷಕರು ಮತ್ತು ಮಕ್ಕಳು ಮುಕ್ತವಾಗಿ ಭಾಗವಹಿಸಿ ಸ್ಕೌಟ್ಸ್ ಮತ್ತು ಗೈಡ್ಸ್ ಅನುಕೂಲ ಪಡೆಯುವ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಮಂಜುನಾಥ್ ಮಾತನಾಡಿ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ, ಸಹಬಾಳ್ವೆಯ ಗುಣ
ಬೆಳೆಯುವುದರೊಂದಿಗೆ ವಿಶ್ವದ ಸವಾಲುಗಳನ್ನು ಎದುರಿಸುವ ತಂತ್ರ, ಪ್ರತಿಭಾ ಕೌಶಲ್ಯ ವೃದ್ಧಿಸುವ ಕುಶಲತೆ, ಬಾಹ್ಯ ಜಗತ್ತನ್ನು ಸಂಪರ್ಕಿಸುವ ಕಲೆ
ಕರಗತವಾಗುತ್ತದೆ ಎಂದರು.
ಇದೇ ವೇಳೆ ತರಬೇತಿ ಕಾರ್ಯಕ್ರಮದಲ್ಲಿ ಸುಮಾರು ೨೭ ಮಂದಿ ತಾಲೂಕು ಮಟ್ಟದ ಬಿ.ಆರ್.ಪಿ.,ಬಿ.ಆರ್.ಸಿ ಹಾಗೂ ಸಿಆರ್ಪಿಗಳು ಶಿಕ್ಷಕರುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಕೃಷ್ಣರಾಜ್ ಅರಸ್, ವೀರೇಶ್, ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ನೀಲಕಂಠಾಚಾರ್ಯ, ಆಯುಕ್ತೆ ಸಂಧ್ಯಾರಾಣಿ, ಸಂಘಟಕ ಕಿರಣ್ ಕುಮಾರ್, ಸ್ವಯಂಸೇವಕ ನಿಹಾಲ್ ಮತ್ತಿತರರು ಹಾಜರಿದ್ದರು.