ಚಿಕ್ಕಮಗಳೂರು: ಹುತ್ತ ಹೊಲ-ಗದ್ದೆ, ತೋಟ, ಬಯಲು ಪ್ರದೇಶದಲ್ಲಿ ಬೆಳೆಯುತ್ತದೆ . ದೇವರ ಮೈ ಮೇಲೆ ಹುತ್ತ ಬೆಳೆಯುವುದನ್ನು ಎಲ್ಲಿಯಾದರೂ ನೋಡಿದ್ದೀರಾ. ಅಂತಹ ಒಂದು ಅಪರೂಪದ ಘಟನೆಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಕಂದೂರು ಸಾಕ್ಷಿಯಾಗಿದೆ.
ಗ್ರಾಮ ದೇವತೆಯ ಮೇಲೆ ಅಚ್ಚರಿ ಎಂಬಂತೆ ದಿನದಿಂದ ದಿನಕ್ಕೆ ಹುತ್ತ ಬೆಳೆಯುತ್ತಿದೆ ಗ್ರಾಮಸ್ಥರು ನೋಡನೋಡುತ್ತಿದ್ದಂತೆ ದಿನೇ-ದಿನೇ ಇಡೀ ದೇವಾಲಯವನ್ನ ಆವರಿಸಿಕೊಳ್ಳುತ್ತಿದೆ. ಗ್ರಾಮದಿಂದ ಹಿಡಿದು ಇಡೀ ಜಿಲ್ಲೆಯಾದ್ಯಂತ ಇದೇ ಸುದ್ದಿ ಹರಡಿದೆ. ಗರ್ಭಗುಡಿಯಲ್ಲಿನ ವಿಗ್ರಹದ ಮೇಲೆ ಕೂಡ ಹುತ್ತ ಬೆಳೆಯುತ್ತಿರುವುದು ಭಕ್ತರ ಅಚ್ಚರಿಗೆ ಕಾರಣವಾಗಿದೆ.
ಕಳೆದ ೧೫ ವರ್ಷಗಳ ಹಿಂದೆ ಇಂಥದೊಂದು ಘಟನೆ ನಡೆದಿತ್ತು. ಇದೀಗ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿರುವುದು ಭಕ್ತರಲ್ಲಿ ಕೌತುಕದದೊಂದಿಗೆ ದೇವಿ ಮೇಲಿನ ನಂಬಿಕೆ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.
ದೇವಿಗೆ ಹುತ್ತದ ಕೆಂಪಮ್ಮ ಎಂದೇ ಖ್ಯಾತಿಯಿದೆ. ದೇವಿ ಹುತ್ತದಲ್ಲಿಉದ್ಬವವಾಗಿದ್ದು ಎಂಬ ನಂಬಿಕೆ ಭಕ್ತರದ್ದು. ಶತಮಾನಗಳಿಂದಲೂ ದಶಕಕೊಮ್ಮೆ ಆಕೆ ಮೇಲೆ ಹುತ್ತ ಬೆಳೆಯುತ್ತಿತ್ತು. ಹೀಗೆ ಹುತ್ತ ಬೆಳೆದಾಗಲೆಲ್ಲ ಅದನ್ನು ವಿಸರ್ಜಿಸಿ ಭಕ್ತರು ಹೊಸದೊಂದು ರೂಪ ಕೊಡುತ್ತಿದ್ದರು. ದೇವರ ಮೇಲೆ ೧೫ ವರ್ಷಕ್ಕೊಮ್ಮೆ ಬೆಳೆಯುತ್ತಿದ್ದ ಹುತ್ತ ಈಗ ಐದೇ ವರ್ಷಕ್ಕೆ ಬೆಳೆಯುತ್ತಿದೆ. ದಿನದಿಂದ ದಿನಕ್ಕೆ ಇಡೀ ದೇವತೆಯನ್ನೇ ಹುತ್ತ ಆವರಿಸಿಕೊಳ್ಳುತ್ತಿದೆ. ಅದಕ್ಕೆ ಆ ಹುತ್ತದ ಕೆಂಪಮ್ಮ ಭಕ್ತರಿಗೆ ಸೂಚನೆಯನ್ನು ಕೊಟ್ಟಿದೆ.
ಈ ಬಾರಿ ಮೂರ್ತಿಯನ್ನು ವಿಸರ್ಜಿಸಿದ ಬಳಿಕ ಕಲ್ಲಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವಂತೆ ದೇವಿಯೇ ಪ್ರಸಾದ ರೂಪದಲ್ಲಿ ಭಕ್ತರಿಗೆ ಸೂಚನೆ ಕೊಟ್ಟಿದೆ ಎನ್ನುವುದು ಗ್ರಾಮಸ್ಥರು ಮಾತು. ಕಳೆದ ಒಂದೂವರೆ ದಶಕಗಳ ಹಿಂದೆ ಇದೇ ರೀತಿ ದೇವಿಯ ಮೇಲೆ ಹುತ್ತ ಬೆಳೆದ ಪರಿಣಾಮ ದೇವರನ್ನು ವಿಸರ್ಜಿಸಿ ಪುನರ್ ಪ್ರತಿಷ್ಠಾಪಿಸಲಾಗಿತ್ತು. ಕಳೆದ ಹಲವು ತಿಂಗಳಿಂದ ದೇವಿಯ ಎಡಗೈ ಸೇರಿದಂತೆ ವಿವಿಧ ಭಾಗಗಳಲ್ಲಿ ಹುತ್ತ ಗಣನೀಯವಾಗಿ ಬೆಳೆಯುತ್ತಿರುವುದನ್ನು ಕಂಡ ಗ್ರಾಮಸ್ಥರು ಅಚ್ಚರಿಗೆ ಒಳಗಾಗಿ ದ್ದಾರೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುತ್ತದ ಕೆಂಪಮ್ಮ ಎಂದೇ ಖ್ಯಾತಿಯಾಗಿದ್ದಾಳೆ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಈ ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.