ಚಿಕ್ಕಮಗಳೂರು:- ಮೇ ೧೦ ರಂದು ನಡೆದ ವಿಧಾನಸಭಾ ಚುನಾವ ಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಜಿಲ್ಲೆಯ ಐದು ಕಾಂಗ್ರೆಸ್ ಅಭ್ಯರ್ಥಿ ಗಳನ್ನು ಜಯಶೀಲರನ್ನಾಗಿ ಮಾಡಿದ ಜಿಲ್ಲೆಯ ಮತದಾರರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಕೆ.ಪಿ.ಅಂಶುಮಂತ್ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ನೂತನವಾಗಿ ಆಯ್ಕೆಯಾಗಿರುವ ಟಿ.ಡಿ.ರಾಜೇಗೌಡ, ಜಿ.ಹೆಚ್. ಶ್ರೀನಿವಾಸ್, ನಯನ ಮೋಟಮ್ಮ, ಕೆ.ಎಸ್.ಆನಂದ ಹಾಗೂ ಹೆಚ್.ಡಿ.ತಮ್ಮಯ್ಯ ಅವರುಗಳನ್ನು ಅಧ್ಯಕ್ಷರು ಅಭಿನಂದಿಸಿದ್ದಾರೆ. ಬಿಜೆಪಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನವಿರೋಧಿ ನೀತಿಗಳಿಂದಾಗಿ ಜನ ರೋಸಿ ಹೋಗಿದ್ದರು. ಇದರೊಂದಿಗೆ ಕಾಂಗ್ರೆಸ್ ಪಕ್ಷವು ರಾಜ್ಯ ಮತ್ತು ಜಿಲ್ಲೆಯಲ್ಲಿ ಜನರ ಪರ ಧ್ವನಿಯಾಗಿ ಸತತ ಹೋರಾಟ ನಡೆಸಿಕೊಂಡು ಬಂದಿತ್ತು.
ಕೆಪಿಸಿಸಿ ಪ್ರಣಾಳಿಕೆ ಮತ್ತು ಗ್ಯಾರಂಟಿ ಕಾರ್ಡ್ ಜನರಿಗೆ ಬಹು ಸತ್ಯ ಮತ್ತು ಹತ್ತಿರ ಆಗಿದ್ದವೂ ಎಂಬ ಕಾರಣಕ್ಕಾಗಿ ಜನರು ನಮ್ಮನ್ನು ಅಭೂತಪೂರ್ವ ಗೆಲುವಿನತ್ತ ತೆಗೆದುಕೊಂಡು ಹೋಗಿದ್ದಾರೆ ಎಂದು ಅಧ್ಯಕ್ಷರು ವಿಶ್ಲೇಷಿಸಿದ್ದಾರೆ.
ಚುನಾಯಿತ ಶಾಸಕರು ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡಿ ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಉಸ್ತುವಾರಿಗಳಾದ ಹೆಚ್.ಎಂ.ರೇವಣ್ಣ ಅವರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಡಾ.ಡಿ.ಎಲ್. ವಿಜಯಕುಮಾರ್, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಮುಖಂಡರಾದ ಎಂ.ಸಿ.ಶಿವಾ ನಂದಸ್ವಾಮಿ, ಎ.ಎನ್.ಮಹೇಶ್, ವೆಂಕಟೇಶ್ ನಾಯ್ಡು ಸೇರಿದಂತೆ ಪಕ್ಷದ ಎಲ್ಲಾ ಕ್ಷೇತ್ರದ ಮುಖಂಡರು ಉಪಸ್ಥಿತರಿದ್ದರು.