ಚಿಕ್ಕಮಗಳೂರು : ಬೇಸಿಗೆ ರಜೆ ಮುಗಿದು ಇನ್ನು ಕೆಲ ದಿನಗಳಲ್ಲೇ ಶಾಲೆಗಳತ್ತ ಮಕ್ಕಳು ಆಗಮಿಸುತ್ತಾರೆ. ಸರ್ಕಾರಿ ಶಾಲೆಗೆ ಬರುವ ಮಕ್ಕಳ ಜೀವಕ್ಕೆ ಅಪಾಯ ಎನ್ನುವ ಸ್ಥಿತಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಹಿರೇಬೈಲು ಗ್ರಾಮದಲ್ಲಿ ಉಂಟಾಗಿದೆ.
ಹಿರೇಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿತಯುವ ಭೀತಿ ಎದುರಿಸುತ್ತಿದೆ. ೯೦ ವರ್ಷದ ಇತಿಹಾಸ ಇರುವ ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗಿನ ೮೦ ಮಕ್ಕಳು ಭವಿಷ್ಯದ ಕನಸು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ, ಈ ಶಾಲಾ ಕಟ್ಟಡ ಈ ಮಳೆಗಾಲದಲ್ಲಿ ಕುಸಿಯಬಹುದು ಎಂಬ ಭೀತಿ ಸ್ಥಳೀಯರಲ್ಲಿ ಆವರಿಸಿದೆ.
ಕಾರ್ಮಿಕರ ಮಕ್ಕಳೇ ಹೆಚ್ಚು:
ಹಲವಾರು ವರ್ಷಗಳಿಂದ ಈ ಶಾಲೆಗೆ ಯಾವ ಅನುದಾನವೂ ಸಿಕ್ಕಿಲ್ಲ. ಕಾಲದ ಹೊಡೆತಕ್ಕೆ ಸಿಕ್ಕ ಕಟ್ಟಡವು ತನ್ನ ಕೊನೆ ದಿನಗಳನ್ನು ಎಣಿಸುತ್ತಿದೆ. ಶಾಲೆಯ ಕಚೇರಿ ಮತ್ತು ಮತಗಟ್ಟೆ ಬಿಟ್ಟರೆ ಉಳಿದ ಎಲ್ಲ ಕೊಠಡಿಗಳ ಗೋಡೆಯೂ ಬೀಳುವ ಸ್ಥಿತಿಯಲ್ಲಿದೆ. ಶಾಲೆಯಲ್ಲಿ ಶೌಚಾಲಯವೂ ಹದಗೆಟ್ಟಿದ್ದು, ಮಕ್ಕಳ ಸ್ಥಿತಿ ದಯನೀಯವಾಗಿದೆ. ಕಳೆದ ಮಳೆಗಾಲದಲ್ಲಿ ಪೋಷಕರು ಶಾಲೆಯ ಗೋಡೆಗಳ ಸುತ್ತಲೂ ಪ್ಲಾಸ್ಟಿಕ್ ಶೀಟ್ ಹೊದಿಸಿ ಗೋಡೆ ಕುಸಿಯುವುದನ್ನು ತಡೆದಿದ್ದರು. ಆದರೆ, ಈ ವರ್ಷ ಗೋಡೆಗಳು ಇನ್ನಷ್ಟು ಅಪಾಯಕಾರಿಯಾಗಿ ಕಾಣುತ್ತಿವೆ ಎಂದು ಪೋಷಕರು ಹೇಳುತ್ತಿದ್ದಾರೆ. ಶಾಲೆಯಲ್ಲಿ ತೋಟ ಕಾರ್ಮಿಕರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಶಿಕ್ಷಕರ ಹುದ್ದೆಯೂ ಖಾಲಿ :
ಮಂಜೂರು ಆಗಿರುವ ಐದು ಶಿಕ್ಷಕರ ಹುದ್ದೆಗಳೂ ಖಾಲಿ ಇವೆ. ಇಲ್ಲಿಗೆ ನಿಯೋಜನೆಗೊಂಡಿರುವ ಒಬ್ಬ ಶಿಕ್ಷಕ ಇಡಕಿಣಿ ಮತ್ತು ಹಿರೇಬೈಲ್ ಶಾಲೆಗಳ ಉಸ್ತುವಾರಿ ಜೊತೆಗೆ ಪಾಠ ಮಾಡುವ ಸಾಹಸ ಮಾಡುತ್ತಿದ್ದಾರೆ.ಈ ಶಾಲಾ ಕಟ್ಟಡದ ಸ್ಥಿತಿ ಬಗ್ಗೆ ಪಂಚಾಯಿತಿ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗೆ ಹಲವಾರು ಬಾರಿ ವರದಿ ಕೊಟ್ಟಿದ್ದೇವೆ.
ಜಿಲ್ಲಾಧಿಕಾರಿಗೂ ಗಂಭೀರತೆ ವಿವರಿಸಿ ಮನವಿ ನೀಡಿದ್ದೇವೆ. ಆದರೆ, ಅಧಿಕಾರಿಗಳ ಸ್ಪಂದನೆಯೇ ಇಲ್ಲ ಎಂದು ಮರಸಣಿಗೆ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ್ ಬೇಸರ ಹೊರಹಾಕಿದ್ದಾರೆ.ಈ ಶಾಲೆಗೆ ೨ ಎಕರೆ ಭೂಮಿ ಇದ್ದರೂ, ಅದನ್ನು ಒತ್ತುವರಿ ಮಾಡಲಾಗಿದೆ. ಅದನ್ನು ಶಾಲೆಗೆ ಬಿಡಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಅಲ್ಲದೆ ನೂತನವಾಗಿ ಆಯ್ಕೆಯಾಗಿರುವ ಶಾಸಕಿ ನಯನ ಮೋಟಮ್ಮ ಶಾಲೆ ಆರಂಭಕ್ಕೂ ಮುನ್ನ ಸ್ಥಳಕ್ಕೆ ಭೇಟ, ತಾತ್ಕಲಿಕವಾಗಿ ಶಾಲೆಯಲ್ಲಿ ದುರುಸ್ತಿ ಕಾರ್ಯ ಮಾಡಿಸುವ ನಿಟ್ಟಿನಲ್ಲಿ ಕ್ರಮವಹಿಸಿಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.