ಕಡೂರು : ಕಾಂಗ್ರೆಸ್ ಪಕ್ಷವು ನೀಡಿರುವ ೫ ಗ್ಯಾರಂಟಿಗಳಿಗೆ ಬಿಜೆಪಿ ಮುಖಂಡರು ಹೊಟ್ಟೆ ಕಿಚ್ಚಿನಿಂದ ವಿರೋಧ ವ್ಯಕ್ತಪಡಿಸುತ್ತಿದ್ದು ಬಿಜೆಪಿ ಕಾರ್ಯಕರ್ತರೆಲ್ಲ ಗ್ಯಾರಂಟಿಗಳು ಬೇಡ ಎಂದು ಬರೆದುಕೊಡಲಿ ಎಂದು ಶಾಸಕ ಕೆ.ಎಸ್.ಆನಂದ್ ವಿರೋಧಿಗಳ ಟೀಕೆಗೆ ತಿರುಗೇಟುನೀಡಿದರು.
ತಾಲೂಕಿನ ಹಿರೇನಲ್ಲೂರು ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಆವರಣದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮ ಪಕ್ಷವು ಯಾವುದೇ ಜಾತಿ ವರ್ಗ ಎಂಬುದನ್ನು ಪರಿಗಣಿಸದೇ ಎಲ್ಲಾ ವರ್ಗದವರಿಗೂ ಗ್ಯಾರಂಟಿಗಳನ್ನು ನೀಡಲು ಮುಂದಾಗಿದೆ.ಕಾಂಗ್ರೆಸ್ ಪಕ್ಷ ಎಂದರೆ ಉಚಿತ ಭಾಗ್ಯಗಳನ್ನು ಸಾರ್ವಜನಿಕರಿಗೆ ನೀಡುವ ಪಕ್ಷ ಎಂಬುದು ಜಗಜಾಹಿರಾಗಿದೆ. ಇದನ್ನು ಸಹಿಸದ ಬಿಜೆಪಿ ಕಾರಣಗಳನ್ನು ಹುಡುಕಿ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ ಎಂದರು.
ತಾವು ಶಾಸಕರಾಗಿ ಕ್ಷೇತ್ರದ ನೂರಾರು ಗ್ರಾಮಗಳಿಗೆ ಭೇಟಿ ನೀಡಿ ಜನರ ಆಶಿರ್ವಾದಕ್ಕೆ ಕೃತಜ್ಞತೆ ಸಲ್ಲಿಸುವುದು ನನ್ನ ಮುಖ್ಯ ಕರ್ತವ್ಯವಾಗಿದೆ ಕ್ಷೇತ್ರದ ಕಾಂಗ್ರೆಸ್ ಮುಖಂಡರ, ಬೂತ್ ಮಟ್ಟದ ಕಾರ್ಯಕರ್ತರ ಶ್ರಮದಿಂದ ನಿಮ್ಮ ಮುಂದೆ ಶಾಸಕನಾಗಿ ನಿಂತಿರುವೆ ಈ ಗ್ರಾಮವು ನನಗೆ ಅತಿ ಹೆಚ್ಚು ಮತಗಳನ್ನು ನೀಡಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸಲಾಗುವುದು ಎಂದರು.
ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ದಾರದ ಬಗ್ಗೆ ಹಾಗೂ ಇಲ್ಲಿನ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದಾಗಿ ಭರವಸೆ ನೀಡಿದರು.
ಕಡೂರು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿಕೊಂಡು ಕೆ.ಎಸ್.ಆನಂದ್ ಅವರನ್ನು ಗೆಲ್ಲಿಸುವ ಮೂಲಕ ಉತ್ತಮ ತೀರ್ಮಾನ ಮಾಡಿರುವುದಕ್ಕೆ ಧನ್ಯವಾದಗಳು. ಈಗ ಮತದಾರರ ಜವಬ್ದಾರಿ ಮುಗಿದಿದೆ ಇನ್ನು ಮುಂದಿನ ೫ ವರ್ಷ ಶಾಸಕರ ಜವಬ್ದಾರಿ ಹೆಚ್ಚಿದೆ ಶಾಸಕರು ಮುಂದಿನ ದಿನಗಳಲ್ಲಿ ಅಭಿವೃದ್ದಿ ಮಾಡುವುದರ ಮೂಲಕ ಮೂಲಭೂತ ಸೌಲಭ್ಯಗಳನ್ನು ನೀಡಲಿದ್ದಾರೆ ಅವರಿಗೆ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ಇದೆ ನಿಮ್ಮ ಮತಗಳಿಗೆ ಲೋಪವಾಗದಂತೆ ಅಭಿವೃದ್ಧಿ ಮಾಡಲಿದ್ದಾರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಇರುವುದರಿಂದ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ವರದಾನವಾಗಲಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂದಿ ಕಲ್ಲೇಶ್,ಗುಮ್ಮನಹಳ್ಳಿ ಸರೋಜಮ್ಮ, ಗಿರಿಯಾಪುರದ ಪ್ರಭುಕು ಮಾರ್,ಆಶೋಕ್, ಪುಷ್ಪಾರಾಜಣ್ಣ, ವೀಣಾ, ಕೃಷ್ಣಮೂರ್ತಿ, ನಿಜಗುಣ, ಮತ್ತು ಗ್ರಾಮಸ್ಥರು ಇದ್ದರು.