ಚಿಕ್ಕಮಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಭಿವೃದ್ಧಿ ಹರಿಕಾರ, ಜನಪ್ರಿಯ ಶಾಸಕ ಸಿ.ಟಿ. ರವಿಯವರ ಗೆಲುವು ನಿಶ್ಚಿತ ಎಂದು ಚಿಕ್ಕಕುರುಬರಹಳ್ಳಿಯ ಬಿಜೆಪಿ ಮುಖಂಡ ಹಿರೇಮಗಳೂರಿನ ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಿ.ಸಿ. ಮಧು ಹೇಳಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸತತ ೪ ಬಾರಿ ಆಯ್ಕೆಯಾಗಿರುವ ಸಿ.ಟಿ.ರವಿಯವರು ಈ ಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕೆಲಸಗಳೇ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ರವರ ಆಶಯದಂತೆ ಎಲ್ಲಾ ವರ್ಗದ, ಜನಾಂಗದ, ಅಭಿವೃದ್ಧಿಗೆ ಶ್ರಮಿಸಿರುವ ಶಾಸಕ ಸಿ.ಟಿ. ರವಿ ಕ್ಷೇತ್ರದಲ್ಲಿ ಕೈಗೊಂಡಿರುವ ಜನಪರ ಕಾರ್ಯಕ್ರಮ ಮತ್ತು ಕ್ಷೇತ್ರದ ಮತದಾರರು ಅವರ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ ಈ ಚುನಾವಣೆಯಲ್ಲಿ ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಸಾವಿರಾರು ಕೋಟಿ ರೂ. ಅನುದಾನಗಳನ್ನು ತಂದಿದ್ದು, ಕ್ಷೇತ್ರದಲ್ಲಿ ಜಾತಿ, ಬೇದ ಎಣಿಸದೇ ಎಲ್ಲಾ ವರ್ಗದ ಸಮುದಾಯಕ್ಕೆ ಅಗತ್ಯ ಕಾಮಗಾರಿಗಳನ್ನು ಕೈಗೊಂಡಿದ್ದು, ಇದರ ಜೊತೆಗೆ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಶಾಸಕರು ಯಶಸ್ವಿಯಾಗಿದ್ದು, ಇದು ಇವರ ಚುನಾವಣೆ ಗೆಲುವಿಗೆ ಅನುಕೂಲವಾಗಲಿದೆ ಎಂದುರು.
ಚಿಕ್ಕಮಗಳೂರು ನಗರಕ್ಕೆ ಮೆಡಿಕಲ್ ಕಾಲೇಜು, ಕಡೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸೇರಿದಂತೆ ಬಸವನಹಳ್ಳಿ ಕೆರೆ ಮತ್ತು ಕೋಟೆ ಕೆರೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಎ.ಐ.ಟಿ. ಸರ್ಕಲ್ನಿಂದ ಹಿರೇಮಗಳೂರುವರೆಗಿನ ಜೋಡಿ ರಸ್ತೆ ಹಾಗೂ ಹೈಮಾಸ್ಕ್ ವಿದ್ಯುತ್ ದೀಪಗಳ ಅಳವಡಿಕೆಯ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಕರಗಡ ನಾಲೆ ಯೋಜನೆ ಮೂಲಕ ಬೆಳವಾಡಿ, ಕಳಸಾಪುರ, ದೇವನೂರು ಸೇರಿದಂತೆ ಈ ಭಾಗದ ಹತ್ತಾರು ಗ್ರಾಮಗಳ ಕೆರೆ ತುಂಬಿಸುವ ಯೋಜನೆ ಕಾರ್ಯಗತವಾಗಿದ್ದು, ಈ ಭಾಗದ ಜನರಲ್ಲಿ ಸಂತಸ ಮೂಡಿಸಿದೆ. ಹಲವು ದಶಕಗಳಿಂದ ನೀರನ್ನೇ ಕಾಣದೇ ಒಣಗಿ ಬರಡಾಗಿದ್ದ ಕೆರೆಗಳು ಈಗ ತುಂಬಿ ಹರಿಯುತ್ತಿದ್ದು, ಈ ಭಾಗದ ರೈತರಲ್ಲಿ ಹರ್ಷ ಮೂಡಿಸಿದೆ. ಕೆರೆ ತುಂಬಿಸುವ ಈ ಯೋಜನೆ ಶಾಸಕರ ದೂರದೃಷ್ಠಿ ಹಾಗೂ ಜನಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಮಧು ಹೇಳಿದ್ದಾರೆ.
ಕಳೆದ ಎರಡು ದಶಕಗಳಿಂದ ಶಾಸಕರಾಗಿರುವ ಸಿ.ಟಿ.ರವಿಯವರ ನಿರಂತರ ಹೋರಾಟದ ಪರಿಣಾಮ ಇಂದು ಹಿಂದೂಗಳ ಧಾರ್ಮಿಕ ಕೇಂದ್ರ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಗಿದ್ದು, ದತ್ತಪೀಠದಲ್ಲಿ ನಿರಂತರವಾಗಿ ಹಿಂದೂ ಅರ್ಚಕರಿಂದ ಪೂಜೆ ಸಾಗಿವೆ. ಇದು ಅವರ ಹಲವು ದಶಕಗಳ ಹೋರಾಟದ ಫಲವೆಂದು ತಿಳಿಸಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿರುವ ೧೫೦ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ವರ್ಗದ ಕಾಲೋನಿಗಳಿಗೆ ಸಿಮೆಂಟ್ ರಸ್ತೆ, ಸಮುದಾಯ ಭವನ ಹಾಗೂ ಅಂಬೇಡ್ಕರ್ ಭವನ ನಿರ್ಮಾಣ ಸೇರಿದಂತೆ ಸ್ಥಳೀಯ ಗ್ರಾಮಗಳ ದೇವಾಲಯಗಳ ಜೀರ್ಣೋದ್ದಾರಕ್ಕೆ ಅನುದಾನ ಕಲ್ಪಿಸಿದ್ದು, ನಗರದ ಬೈಪಾಸ್ ರಸ್ತೆಯಲ್ಲಿರುವ ಬಸವ ತತ್ವ ಪೀಠದ ಅಭಿವೃದ್ಧಿಗೆ ಶಾಸಕ ಸಿ.ಟಿ.ರವಿಯವರು ೩ ಕೋಟಿ ಅನುದಾನ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
ಶಾಸಕ ಸಿ.ಟಿ. ರವಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ಹಾಗೂ ಜನಪರ ಕಾಳಜಿ ಮತ್ತು ಕ್ಷೇತ್ರದ ಜನರೊಂದಿಗೆ ಹೊಂದಿರುವ ನಿಕಟ ಸಂಪರ್ಕ, ಸರಳ ವ್ಯಕ್ತಿತ್ವ ಈ ಬಾರಿಯ ಚುನಾವಣೆಯಲ್ಲಿ ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.