ಚಿಕ್ಕಮಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಬಿಜೆಪಿ ಪಕ್ಷದ ಘಟಾನುಘಟಿ ನಾಯಕರಿಗೂ ಈ ಚುನಾವಣೆ ಸೋಲಿನ ರುಚಿ ತೋರಿಸಿದೆ. ಹಾಲಿ ಸಚಿವ ಸಿಟಿ ರವಿ ಕೂಡ ಈ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ.
ನಾಲ್ಕು ಬಾರಿಯ ಶಾಸಕ ಸಿಟಿ ರವಿ ೭೫೦೦ ಮತಗಳ ಅಂತರದಿಂದ ಕಾಂಗ್ರೆಸ್ನ ಹೆಚ್ಡಿ ತಿಮ್ಮಯ್ಯ ವಿರುದ್ಧ ಸೋಲು ಅನುಭವಿಸಿದ್ದಾರೆ. ಈ ಸೋಲಿನ ಬಳಿಕ ಸಿಟಿ ರವಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು ಸೋಲನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. “ಈ ಸೋಲನ್ನು ನಾನು ಒಪ್ಪಿಕೊಳ್ಳುತ್ತೇನೆ.
ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಜನತೆಗೆ ತುಂಬು ಹೃದಯದಿಂದ ಧನ್ಯವಾದ ಸಲ್ಲಿಸುತ್ತೇನೆ. ಅವರೆಲ್ಲರೂ ಇಷ್ಟು ವರ್ಷಗಳ ಕಾಲ ನನಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಗೆದ್ದ ಎಲ್ಲಾ ಅಭ್ಯರ್ಥಿಗಳಿಗೂ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಅವರೆಲ್ಲರಿಗೂ ಒಳ್ಳೆಯದಾಗಲಿ” ಎಂದು ಸಿಟಿ ರವಿ ಟ್ವೀಟ್ ಮಾಡಿದ್ದಾರೆ.
ಇನ್ನು ಮತ್ತೊಂದು ಟ್ವೀಟ್ ಮಾಡಿರುವ ಸಿಟಿ ರವಿ ಈ ಸೋಲನ್ನು ಸಿದ್ದಾಂತದ ಸೋಲು ಅಲ್ಲ ಎಂದು ಉಲ್ಲೆಖಿಸಿದ್ದಾರೆ. ಇದು ನಮ್ಮ ವೈಯಕ್ತಿಕವಾದ ಸೋಲು ಎಂದಿರುವ ಸಿಟಿ ರವಿ ಎಲ್ಲಿ ತಪ್ಪಾಗಿದೆ ಎಂದು ಕಂಡುಕೊಂಡು ಮುಂದಿನ ದಿನಗಳಲ್ಲಿ ತಪ್ಪನ್ನು ಸರಿಪಡಿಸಿಕೊಳ್ಳುತ್ತೇವೆ. ನಮ್ಮ ಬೆಂಬಲಕ್ಕೆ ನಿಂತ ಎಲ್ಲಾ ಕನ್ನಡಿಗರಿಗೂ ಧನ್ಯವಾದ ಸಲ್ಲಿಸಿದ್ದಾರೆ. “ಅಸೆಂಬ್ಲಿ ಚುನಾವಣೆಯಲ್ಲಿ ಇಂದಿನ ನಮ್ಮ ಸೋಲು ವೈಯಕ್ತಿಕವಾದದ್ದು.
ಅದು ನಮ್ಮ ಸಿದ್ದಾಂತಕ್ಕೆ ಆದ ಸೋಲು ಅಲ್ಲ. ನಾವು ಎಲಕ್ಲಿ ಎಡವಿದೆವು ಎಂಬುದನ್ನು ನಾವು ಪರಾಮರ್ಶೆ ಮಾಡಿಕೊಳ್ಳಲಿದ್ದು ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಸುವರ್ಣ ಕರ್ನಾಟಕವನ್ನು ಕಟ್ಟುವ ನಮ್ಮ ಪ್ರಯತ್ನ ಮುಂದುವರಿಯುತ್ತದೆ. ನಮಗೆ ಬೆಂಬಲವನ್ನು ನೀಡಿರುವ ಎಲ್ಲಾ ಕನ್ನಡಿಗರಿಗೂ ಧನ್ಯವಾದಗಳು” ಎಂದಿದ್ದಾರೆ ಸಿಟಿ ರವಿ.
ಕರ್ನಾಟಕಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ೧೩೬ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಸಂಪೂರ್ಣ ಬಹುಮತ ಪಡೆದುಕೊಂಡು ಅಧಿಕಾರಕ್ಕೇರಿದೆ. ಇನ್ನು ಬಿಜೆಪಿ ೬೫ ಕ್ಷೇತ್ರಗಳಲ್ಲಿ ಮಾತ್ರವೇ ಗೆಲುವು ಸಾಧಿಸಿದ್ದು ಜೆಡಿಎಸ್ ಸ್ಥಾನ ೧೯ಕ್ಕೆ ಕುಸಿದಿದೆ. ಕಾಂಗ್ರೆಸ್ ಗೆಲುವಿನ ಸಂಭ್ರಮದಲ್ಲಿದ್ದರೆ ಬಿಜೆಪಿ ಸೋಲಿನ ಪರಾಮರ್ಶೆಗೆ ಮುಂದಾಗಿದೆ.