ತೀರ್ಥಹಳ್ಳಿ : ಸೆಪ್ಟೆಂಬರ್ 28ರಂದು ತೀರ್ಥಹಳ್ಳಿ ತಾಲೂಕಿನ ಮಿಟ್ಲುಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಣಸೆಕೊಪ್ಪ ಅರಣ್ಯ ಪ್ರದೇಶದಲ್ಲಿ ಸ್ವಿಫ್ಟ್ ಕಾರೊಂದು ಸುಟ್ಟು ಕರಕಲಾಗಿತ್ತು. ಅದೇ ಕಾರಿನಲ್ಲಿ ಓರ್ವ ವ್ಯಕ್ತಿಯೂ ಕೂಡ ಸುಟ್ಟು ಹೋಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ತೀರ್ಥಹಳ್ಳಿ ಪೊಲೀಸರು ತನಿಖೆ ನಡೆಸಿದಾಗ ಮೊದಲು ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿತ್ತು. ಕಾರಿನ ನಂಬರ್ ಪ್ಲೇಟ್ನಿಂದ ತನಿಖೆ ಪ್ರಾರಂಭಿಸಿ, ಕಾರು ಯಾರದ್ದು ಎಂದು ಪತ್ತೆ ಮಾಡಿದ್ದರು. ಈ ವೇಳೆ, ಕಾರು ಸಾಗರ ತಾಲೂಕು ಆಚಾಪುರದ ವಿನೋದ್(45) ಅವರದ್ದಾಗಿದೆ ಎಂದು ತಿಳಿದು ಬಂದಿದೆ. ವಿನೋದ್ ಹರ್ಬಲ್ ಲೈಫ್ ವ್ಯವಹಾರ ನಡೆಸುತ್ತಿದ್ದ.
ವಿನೋದ್ ಹೊಸನಗರ ಬಟ್ಟೆಮಲ್ಲಪ್ಪದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿತ್ತು. ಇದೇ ಕಾರಣಕ್ಕೆ ಮನೆಯಲ್ಲಿ ಪದೇ ಪದೆ ಗಲಾಟೆಗೂ ಕಾರಣವಾಗಿತ್ತು. ಹಣವನ್ನು ಮನೆಗೆ ನೀಡದೆ ಆತ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ನೀಡುತ್ತಿದ್ದನಂತೆ. ಇದು ಕುಟುಂಬಸ್ಥರ ಕೋಪಕ್ಕೆ ಕಾರಣವಾಗಿದೆ. ಅಲ್ಲದೆ ಇತ್ತೀಚೆಗೆ ತನ್ನ ಒಂದು ಎಕರೆ ಭೂಮಿಯನ್ನು ಮಾರಿ ಅದರಲ್ಲಿ ಸಿಕ್ಕಿರುವ 51 ಲಕ್ಷ ರೂ ಸಾಲವನ್ನು ತೀರಿಸಿ, ಉಳಿದ ಹಣವನ್ನು ಮಹಿಳೆಗೆ ನೀಡಲು ವಿನೋದ್ ಯೋಜನೆ ರೂಪಿಸಿದ್ದ.
ಅಲ್ಲದೇ, ತನ್ನ ಇನ್ನೊಂದು ಎಕರೆ ಭೂಮಿಯನ್ನು ಮಾರಲು ತಯಾರಿಯನ್ನೂ ನಡೆಸಿದ್ದ. ಇದು ಕುಟುಂಬಸ್ಥರಿಗೆ ತಿಳಿದು ಕೊಲೆಗೆ ಪ್ಲಾನ್ ಮಾಡಿದ್ದರಂತೆ. ಈ ಕೊಲೆಗೆ ವಿನೋದ್ನ ಹೆಂಡತಿ ಬೀನು (42) ಹಿರಿಯ ಮಗ ವಿವೇಕ್ (21), ಕಿರಿಯ ಮಗ ವಿಷ್ಣು (19) ಸಾಥ್ ನೀಡಿದ್ದರು. ಪ್ರಕರಣದ ಮಾಸ್ಟರ್ ಮೈಂಡ್ ಬೀನು ಅಕ್ಕನ ಮಗ ಅಶೋಕ್ (23) ಹಾಗೂ ವಿನೋದ್ ಸಹೋದರ ಸಂಜಯ್ (36) ಸಹ ಭಾಗಿಯಾಗಿದ್ದರು.
ಸೆಪ್ಟೆಂಬರ್ 25ರಂದು ಐವರೂ ಕುಳಿತು ಹತ್ಯೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ನಂತರ 26 ರಂದು ಆನಂದಪುರದ ಬಂಕ್ನಲ್ಲಿ ಪೆಟ್ರೋಲ್ ಖರೀದಿಸಿದ್ದಾರೆ. ಅಂದೇ ವಿನೋದ್ ಕುತ್ತಿಗೆಗೆ ಕಬ್ಬಿಣದ ತಂತಿಯಿಂದ ಬಿಗಿದು, ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ತಮ್ಮ ಮೊಬೈಲ್ಗಳನ್ನು ಸ್ವಿಚ್ಆಫ್ ಮಾಡಿ ಮನೆಯಲ್ಲಿಯೇ ಬಿಟ್ಟು, ಕಾರಿನಲ್ಲಿ ವಿನೋದ್ ಶವವನ್ನು ತೆಗೆದುಕೊಂಡು ಯಡೇಹಳ್ಳಿ, ರಿಪ್ಪನ್ಪೇಟೆ, ಹುಂಚದ ಕಟ್ಟೆ ಮಾರ್ಗವಾಗಿ ಹುಣಸೇಕೊಪ್ಪಕ್ಕೆ ರಾತ್ರಿ 11 ಗಂಟೆಗೆ ತಲುಪಿದ್ದಾರೆ.
ವಿನೋದ್ ಶವವನ್ನು ಕಾರಿನ ಡ್ರೈವಿಂಗ್ ಸೀಟ್ನಲ್ಲಿರಿಸಿ, ಹೊರಗಿನಿಂದ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ. ಯಾವುದೇ ಗುರುತು ಸಿಗಬಾರದು ಎಂದು ಕಾರಿನ ಪ್ಲೇಟ್ ಕಿತ್ತು ಬಿಸಾಡಿದ್ದಾರೆ. ತಮ್ಮ ಗುರುತು ಸಿಗಬಾರದೆಂದು ಪಿನಾಯಿಲ್ನಿಂದ ಜಾಗವನ್ನು ಸ್ವಚ್ಛಗೊಳಿಸಿದ್ದಾರೆ. ಆ ಬಳಿಕ ಅಲ್ಲಿಂದ ಸೀದಾ ಮನೆಗೆ ತೆರಳಿದ್ದಾರೆ. ಮನೆಯ ಹಿಂಭಾಗ ತಮ್ಮ ಬಟ್ಟೆ, ಚಪ್ಪಲಿಯನ್ನೂ ಸುಟ್ಟು ಹಾಕಿ ಯಾವುದೇ ಸಾಕ್ಷ್ಯ ಸಿಗದಂತೆ ನೋಡಿಕೊಂಡಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಅನುಮಾನಗೊಂಡು ಕುಟಂಬದ ಐವರು ಸದಸ್ಯರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲು ಪ್ರಾರಂಭಿಸಿದ್ದಾರೆ. ಐವರಿಂದಲೂ ಸಹ ಬೇರೆ ಬೇರೆ ಉತ್ತರ ಬಂದ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನಗೊಂಡು ತಮ್ಮ ವಿಚಾರಣೆಯನ್ನು ತೀವ್ರಗೊಳಿಸಿದಾಗ ಆರೋಪಿಗಳು ತಮ್ಮ ಕೃತ್ಯವನ್ನು ಬಾಯಿ ಬಿಟ್ಟಿದ್ದಾರೆ. ಸದ್ಯ ಎಲ್ಲರನ್ನೂ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ. ತೀರ್ಥಹಳ್ಳಿ ಡಿವೈಎಸ್ಪಿ ಹಾಗೂ ಸಿಪಿಐ ಸಂತೋಷ್ ನೇತೃತ್ವದ ತಂಡ ಕೇವಲ ಮೂರು ದಿನದಲ್ಲಿ ಈ ಪ್ರಕರಣಕ್ಕೆ ಅಂತ್ಯ ಹಾಡಿದೆ.