ಶಿವಮೊಗ್ಗ : ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನ ಗಡಿಪಾರು ಮಾಡಿ ಶಿವಮೊಗ್ಗದ ಉಪವಿಭಾಗಾಧಿಕಾರಿಗಳು ಆದೇಶಿಸಿದ್ದಾರೆ.
ಶಿವಮೊಗ್ಗದ ನವುಲೆ ಮಾರುತಿ ಬಡಾವಣೆ, ಹೊಸಮನೆ 4ನೇ/ತಿರುವಿನ ಸಚಿನ್ ಎಸ್. ಬಿನ್ ಶ್ರೀನಿವಾಸ ಹಾಗೂ ಅಣ್ಣಾನಗರ 5ನೇ ತಿರುವು ವಾಸಿ ಹರೀಶ್ ಆರ್. ಅಲಿಯಾಸ್ ತೇಗು ಬಿನ್ ರುದ್ರಪ್ಪ ಎಂಬ ಇಬ್ಬರು ಅಪರಾಧಿಗಳನ್ನು ಕರ್ನಾಟಕ ಪೊಲೀಸ್ ಕಾಯ್ದೆ ಅಧಿನಿಯಮ 1963 ಕಲಂ 55
ರನ್ವಯ ಉಪವಿಭಾಗ ಸರಹದ್ದಿನಿಂದ ಹಾಗೂ ಶಿವಮೊಗ್ಗ ಜಿಲ್ಲೆಯಿಂದ ಗಡಿಪಾರು ಮಾಡಿ ಶಿವಮೊಗ್ಗ ಉಪವಿಭಾಗದ ಉಪವಿಭಾಗಾಧಿಕಾರಿಗಳು ಆದೇಶಿಸಿರುತ್ತಾರೆ.
ಮೇಲ್ಕಂಡ ಇಬ್ಬರು ಆರೋಪಿಗಳು ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಾದ ಗಾಂಜಾ ಅಫೀಮು, ಜೂಜಿನ ಪ್ರಕರಣಗಳಲ್ಲಿ ತೊಡಗಿದ್ದು, ಕಳೆದ ಒಂದು ವರ್ಷದಿಂದ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಮಾನಿಸಿರುವ, ಉಪವಿಭಾಗೀಯ ದಂಡಾಧಿಕಾರಿಗಳಾದ ಪ್ರಕಾಶ್ ಟಿ.ವಿ, ಗಡಿಪಾರಿಗೆ ಆದೇಶಿಸಿದ್ದಾರೆ.
ಪೊಲೀಸ್ ಕಾಯ್ದೆ ಅಧಿನಿಯಮ 1963 ರ ಕಲಂ 55 ರಡಿ ಆರೋಪಿ ಸಚಿನ್ ಎಸ್. ಬಿನ್ ಶ್ರೀನಿವಾಸ ಇವನಿಗೆ 6 ತಿಂಗಳ ಅವಧಿಗೆ ಮತ್ತು ಆರೋಪಿ ಹರೀಶ್ ಆರ್ ಅಲಿಯಾಸ್ ತೇಗು ಬಿನ್ ರುದ್ರಪ್ಪ ಇವನಿಗೆ 3 ತಿಂಗಳ ಅವಧಿಗೆ ಈ ಉಪವಿಭಾಗದ ಸರಹದ್ದಿನಿಂದ ಹಾಗೂ ಶಿವಮೊಗ್ಗ ಜಿಲ್ಲೆಯಿಂದ ಗಡಿಪಾರು ಮಾಡಿ ತೀರ್ಪು ನೀಡಿ ಆದೇಶಿಸಿದ್ದಾರೆ.
ಈ ಆದೇಶ ದಿ:06/12/2021 ರಿಂದಲೇ ಜಾರಿಗೊಳ್ಳುತಿದ್ದು, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಇವರಿಗೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.