ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯ ಬಳಿಕ, ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು.
ಅಲ್ಲದೇ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿತ್ತು. ಇದೀಗ ಪರಿಸ್ಥಿತಿ ತಿಳಿಗೊಂಡ ಹಿನ್ನಲೆಯಲ್ಲಿ ನಾಳೆಯಿಂದ ಶಾಲಾ-ಕಾಲೇಜು ಪುನರಾರಂಭಕ್ಕೆ ಡಿಸಿ ಆದೇಶಿಸಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವಂತ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು, ನಾಳೆಯಿಂದ ನಗರದಲ್ಲಿ ಶಾಲಾ-ಕಾಲೇಜುಗಳ ಪುನರಾರಂಭಕ್ಕೆ ಸೂಚಿಸಿದ್ದಾರೆ. ಈ ಮೂಲಕ ಕಳೆದ ಒಂದು ವಾರದಿಂದ ಬಂದ್ ಆಗಿದ್ದಂತ ಶಾಲಾ-ಕಾಲೇಜುಗಳು ನಾಳೆಯಿಂದ ಪುನರಾರಂಭಗೊಳ್ಳಲಿವೆ.
ಅಂದಹಾಗೇ ಬಜರಂಗದಳದ ಕಾರ್ಯಕರ್ತ ಹರ್ಷ ಕಳೆದ ಭಾನುವಾರದಂದು ಹತ್ಯೆಯಾಗಿತ್ತು. ಈಗಾಗಲೇ ಈ ಸಂಬಂಧ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣ ಆರೋಪಿಗಳನ್ನು ಪೊಲೀಸರು ತನಿಖೆಗೂ ಒಳಪಡಿಸುತ್ತಿದ್ದಾರೆ. ಈ ಬೆನ್ನಲ್ಲೇ ಶಾಲಾ-ಕಾಲೇಜುಗಳಿಗೆ ಘೋಷಿಸಿದ್ದಂತ ರಜೆಯನ್ನು ರದ್ದು ಪಡಿಸಿ, ನಾಳೆಯಿಂದ ಪುನರಾರಂಭಕ್ಕೆ ಡಿಸಿ ಆದೇಶಿಸಿದ್ದಾರೆ.