ಶಿವಮೊಗ್ಗ: ಭದ್ರಾವತಿ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ 1ರಲ್ಲಿ ಆಘಾತಕಾರಿ ದುರ್ಘಟನೆ ನಡೆದಿದೆ. ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಪ್ಲಾಟ್ ಫಾರಂನಿಂದ ಕೆಳಗೆ ಬಿದ್ದು ತಂದೆ, ಮಗ ಮೃತಪಟ್ಟಿದ್ದಾರೆ.
ಮೋಹನ್ ಪ್ರಸಾದ್ (70 ವ) ಮತ್ತು ಅಮರನಾಥ್ (30 ವ) ಮೃತರು. ತಂದೆ ಮತ್ತು ಮಗ ರಾತ್ರಿ ರೈಲಿನಲ್ಲಿ ಬೆಂಗಳೂರಿಗೆ ತೆರಳಬೇಕಿತ್ತು. ನಿಲ್ದಾಣಕ್ಕೆ ಬಂದಾಗ ರೈಲು ಹೊರಟಿತ್ತು. ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಮಗ ಅಮರನಾಥ್ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಆತನ ರಕ್ಷಣೆಗೆ ಧಾವಿಸಿದ ಮೋಹನ್ ಪ್ರಸಾದ್ ಅವರು ರೈಲಿನ ಅಡಿಗೆ ಸಿಲುಕಿದ್ದಾರೆ. ಅಮರನಾಥ್ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೋಹನ್ ಪ್ರಸಾದ್ ಅವರಿಗೂ ಗಂಭೀರ ಗಾಯವಾಗಿತ್ತು. ಚಿಕಿತ್ಸೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.