ರಾಮನಗರ: ರಾಗಿ ಬಣವೆಗೆ ಬಿದ್ದ ಬೆಂಕಿಯನ್ನು ನಂದಿಸಲು ಹೋದ ವ್ಯಕ್ತಿಯೊಬ್ಬ ಅಗ್ನಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಬಿಡದಿ ಹೋಬಳಿ ಕೋಡಿಯಾಲ ಗ್ರಾಮದಲ್ಲಿ ಬುಧವಾರ ನಡೆದಿದೆ.
ಕೋಡಿಯಾಲ ಗ್ರಾಮದ ರೈತ ಕೆಂಪಯ್ಯ(65) ಮೃತರು. ಇದೇ ಗ್ರಾಮದ ಲಕ್ಷ್ಮಿ ನಾರಾಯಣ ಎಂಬುವರು ಒಂದೂವರೆ ಎಕರೆಯಲ್ಲಿ ರಾಗಿ ಬೆಳೆ ಬೆಳೆದು. ಒಕ್ಕಣೆ ಮಾಡುವ ಸಲುವಾಗಿ ಮೆದೆ ಹಾಕಿದ್ದರು. ಬುಧವಾರ ಮಧ್ಯಾಹ್ನದ ಸಮಯದಲ್ಲಿ ಲಕ್ಷ್ಮೀನಾರಾಯಣರವರ ಹುಲ್ಲಿನ ಮೆದೆಗೆ ಬೆಂಕಿ ಬಿದ್ದಿತ್ತು. ಇದೇ ಹೊತ್ತಿನಲ್ಲಿ ತೋಟದ ಕಡೆ ತೆರಳುತ್ತಿದ್ದ ಕೆಂಪಯ್ಯ ಮೆದೆಗೆ ಬೆಂಕಿ ಹೊತ್ತಿ ಉರಿಯುತ್ತಿದ್ದದನ್ನು ಕಂಡು ನಂದಿಸಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಬೆಂಕಿಯ ಜ್ವಾಲೆ ಹಾಗೂ ಹೊಗೆಯ ನಡುವೆ ಸಿಲುಕಿದ ಕೆಂಪಯ್ಯ ಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಎರಡು ರಾಗಿ ಮೆದೆಗಳು ಭಸ್ಮಗೊಂಡಿದ್ದು, ಮೃತ ಕೆಂಪಯ್ಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಯಿತು. ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಬಿಡದಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.