ಮೈಸೂರು: ಮೈಸೂರಿನಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣ ಬೆಳಕಿಗೆ ಬಂದಿದ್ದು, ಗುರುವಾರ ಐವರಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಸದ್ಯ ಸಕ್ರಿಯ ಸೋಂಕಿತರ ಸಂಖ್ಯೆ 10ಕ್ಕೆ ಹೆಚ್ಚಳವಾಗಿದೆ.
ಸೋಂಕಿತರು ಮಹಾರಾಷ್ಟ್ರದಿಂದ ವಾಪಸ್ಸಾಗಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದವರಾಗಿರುವುದರಿಂದ ಸ್ವಲ್ಪ ಮಟ್ಟಿಗೆ ಜನರಲ್ಲಿ ಆತಂಕ ಕಡಿಮೆಯಾಗಿದೆ. ಕಳೆದೆರಡು ದಿನಗಳಿಂದ ಮೈಸೂರಿನಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗಿರಲಿಲ್ಲ. ಹೀಗಾಗಿ ಒಂದಿಷ್ಟು ನೆಮ್ಮದಿ ಪಡುವಾಗಲೇ ಪ್ರಕರಣ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಸೋಂಕಿತರು ಐವರು ಕೂಡ ಪುರುಷರಾಗಿದ್ದು, ಇವರನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಐವರು ಕ್ವಾರಂಟೈನ್ನಲ್ಲಿದ್ದರಿಂದ ಸಮುದಾಯಕ್ಕೆ ಸೋಂಕು ಹರಡುವ ಭೀತಿ ಇಲ್ಲ ಎನ್ನಬಹುದಾಗಿದೆ. ಜಿಲ್ಲೆಂiÀಲ್ಲಿ ಇದುವರೆಗೆ 106 ಸೋಂಕು ಪ್ರಕರಣಗಳು ವರದಿಯಾಗಿದ್ದು, 96 ಮಂದಿ ಗುಣಮುಖರಾಗಿದ್ದಾರೆ. ಸದ್ಯ 10 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದುವರೆಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಮೈಸೂರಿನಲ್ಲಿ ಕೊರೋನಾ ಸೋಂಕಿತರ ಪೈಕಿ ಹೆಚ್ಚಿನವರು ಗುಣಮುಖರಾಗಿದ್ದಾರೆ. ಜತೆಗೆ ಜ್ಯುಬಿಲೆಂಟ್ ಕಾರ್ಖಾನೆ ಪ್ರಕರಣ ಹೊರತು ಪಡಿಸಿದರೆ ಇತ್ತೀಚೆಗಿನ ದಿನಗಳಲ್ಲಿ ಪತ್ತೆಯಾಗುತ್ತಿರುವ ಪ್ರಕರಣಗಳೆಲ್ಲವೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಮೊದಲಿಗೆ ಸುಮಾರು 90 ಮಂದಿಗೆ ಸೋಂಕು ಕಾಣಿಸಿಕೊಂಡು ಅವರೆಲ್ಲರೂ ಗುಣಮುಖರಾಗಿದ್ದರು. ಇದೀಗ ಮತ್ತೆ ಹತ್ತು ಪ್ರಕರಣಗಳು ಸಕ್ರಿಯವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರು ಲಾಕ್ ಡೌನ್ ನಂತರ ಯಥಾ ಸ್ಥಿತಿಗೆ ಮರಳುತ್ತಿರುವ ವೇಳೆಯಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಜನರಲ್ಲಿ ಒಂದಷ್ಟು ಭೀತಿ ಹುಟ್ಟಿಸಿದೆ.