ಮೈಸೂರು: ಮಾಜಿ ಸಚಿವ ಎಸ್.ಎ ರಾಮದಾಸ್ ವಿರುದ್ದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಪ್ರೇಮಕುಮಾರಿ ನಿರ್ಧರಿಸಿದ್ದು, ಈ ಕುರಿತು ಮುಂದಿನ ದಿನಗಳಲ್ಲಿ ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದನ್ನು ತಿಳಿಸುವುದಾಗಿ ಪ್ರೇಮಕುಮಾರಿ ಸ್ಪಷ್ದಪಡಿಸಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಗೆ ಕೇವಲ 5 ತಿಂಗಳು ಬಾಕಿ ಇರುವಾಗಲೇ ಶತಾಯಗತಾಯ ಕೆ.ಆರ್ ಕ್ಷೇತ್ರದಿಂದ ಅಭ್ಯರ್ಥಿಯಾಗಬೇಕೆಂದು ಈಗಾಗಲೇ ಕ್ಷೇತ್ರದಲ್ಲಿ ಕಸದ ವಿಚಾರವಾಗಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡು ಜನರ ಮನಸ್ಸು ಗೆಲ್ಲಲು ಪ್ರಯತ್ನ ನಡೆಸಿದ ರಾಮದಾಸ್ ಗೆ ಪ್ರೇಮ ಕುಮಾರಿ ಮತ್ತೊಮ್ಮೆ ಶಾಕ್ ನೀಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್. ಕ್ಷೇತ್ರದಿಂದ ಪಕ್ಷೇತರ ಅಥವಾ ಉಪೇಂದ್ರ ಹಾಗೂ ಅನುಪಮಾ ಶೆಣೈ ಸ್ಥಾಪನೆ ಮಾಡಿರುವ ನೂತನ ಪಕ್ಷಗಳ ಮೂಲಕ ಅಭ್ಯರ್ಥಿಯಾಗುವ ಮೂಲಕ ರಾಮದಾಸ್ ಗೆ ಟಾಂಗ್ ಕೊಡಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪ್ರೇಮಕುಮಾರಿ, ರಾಮ್ ದಾಸ್ ನನ್ನ ರಾಜಕೀಯ ಗುರು. ಅವರಿಗೂ ನನ್ನನ್ನು ಚುನಾವಣೆಗೆ ನಿಲ್ಲಿಸಬೇಕು ಎಂಬ ಆಸೆ ಇತ್ತು. ಕೊನೆ ಕ್ಷಣದಲ್ಲಿ ತಾವೇ ನಾಯಕತ್ವ ತೆಗೆದುಕೊಳ್ಳುತ್ತೇನೆ ಅಂದ್ರು ಅಷ್ಟೆ. ನಾನು ಅವರಿಂದ ಕಲಿತ ವಿದ್ಯೆಯನ್ನು, ನನ್ನ ಸಾಮರ್ಥ್ಯವನ್ನು ತೋರಿಸಲು ಬಂದಿದ್ದೇನೆ. ನಾನು ಅವರ ವಿರುದ್ಧ ಗೆಲ್ಲುತ್ತೇನೆ ಎಂದು ಗೊತ್ತಿದೆ. ಅದಕ್ಕಿಂತ ಮುಖ್ಯವಾಗಿ ನನ್ನ ಮಕ್ಕಳ ಭವಿಷ್ಯ ಮುಖ್ಯ. ಇದಕ್ಕಾದರೂ ರಾಮ್ ದಾಸ್ ನನ್ನ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಿ. ನನಗೆ ರಾಜಕೀಯ ಒತ್ತಡದಿಂದಲೇ ಅನ್ಯಾಯವಾಗಿದೆ. ಹೀಗಾಗಿ ನನಗೆ ಅನ್ಯಾಯವಾದ ಸ್ಥಳದಲ್ಲೇ ನ್ಯಾಯ ಕಂಡುಕೊಳ್ಳಲು ಮುಂದಾಗಿದ್ದೇನೆ. ಪಕ್ಷೇತರವಾಗಿ ಇಲ್ಲದಿದ್ದರೂ ಹೊಸ ಪಕ್ಷಗಳ ಮೂಲಕವಾದರೂ ಚುನಾವಣೆ ಎದುರಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿದರು.
ಮಾತುಕತೆಯ ಪ್ರಶ್ನಯೇ ಇಲ್ಲ: ರಾಮದಾಸ್
ಪ್ರೇಮಕುಮಾರಿಗೆ ತಾಯಿ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆ ಎದುರಿಸಬಹುದು. ಆದರೆ ನಾನು ಯಾವಾಗ ಹೋರಾಟಕ್ಕೆ ಮುಂದಾದರೂ ಪ್ರೇಮಕುಮಾರಿ ಈ ರೀತಿ ತೊಂದರೆ ನೀಡುತ್ತಿದ್ದಾಳೆ. ಇದರ ಹಿಂದೆ ಯಾರದ್ದೋ ಕುಮ್ಮಕ್ಕು ಇರಬಹುದು. ಆದರೆ ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸಾಮಾನ್ಯನಾದ ನನ್ನನ್ನು ಜಿಲ್ಲಾ ಮಂತ್ರಿ ಮಾಡಿದ ಜನ ನನಗೆ ಮುಖ್ಯ. ಅವರಿಗಾಗಿ ನಾನು ಜೀವ ಹೋದರೂ ಸರಿಯೇ ಹೋರಾಟ ಮುಂದುವರೆಸುತ್ತೇನೆ. ಪ್ರಕರಣ ಕೋರ್ಟ್ ಮುಂದೆ ಇರುವುದರಿಂದ ಮಾತುಕತೆಯ ಪ್ರಶ್ನೆಯೇ ಇಲ್ಲ. ಎಲ್ಲವನ್ನೂ ಜನ ನೋಡುತ್ತಿದ್ದಾರೆ, ಅವರೇ ತೀರ್ಮಾನ ಮಾಡುತ್ತಾರೆ ಎಂದರು.