ಮೈಸೂರು: ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರು ಮರೀಗೌಡ ಅವರ ಸಂಬಂಧಿಗೆ ಸೇರಿದೆ ಎನ್ನಲಾಗಿದ್ದ ಬಾರ್ ಲೈಸೆನ್ಸ್ ವೊಂದನ್ನು ರದ್ದು ಮಾಡಿದ್ದರು ಎಂಬುದು ಬೆಳಕಿಗೆ ಬಂದಿದೆ. ಚಿತ್ರವನ ರೆಸಾರ್ಟ್ ಗೆ ನೀಡಿದ್ದ ಬಾರ್ ಲೈಸೆನ್ಸನನ್ನು ನವೀಕರಿಸಲು ಅವಕಾಶ ನೀಡದ ಶಿಖಾ ಅವರು ಲೈಸೆನ್ಸ್ ನನ್ನು ರದ್ದುಗೊಳಿಸಿದ್ದರು. ಅದ್ದರಿಂದ ಮರೀಗೌಡ ಅವರು ಜಿಲ್ಲಾಧಿಕಾರಿಯ ವಿರುದ್ಧ ಸಿಡಿದೆದ್ದಿದ್ದರು. ಮೈಸೂರು-ಮಾನಂದವಾಡಿ ರಸ್ತೆಯಲ್ಲಿರುವ ಚಿತ್ರವನ್ನು ರೆಸಾರ್ಟ್ ರಾಜ್ಯ ಹೆದ್ದಾರಿಯ ಸಮೀಪದಲ್ಲಿ. ಅಬಕಾರಿ ಕಾಯ್ದೆ ನಿಯಮದ ಪ್ರಕಾರ ರೆಸಾರ್ಟ್ ಗಳು ಹಾಗೂ ಬಾರ್ಗಳು ಹೆದ್ದಾರಿಯಿಂದ 220 ಮೀಗಳಿಂದ ದೂರ ಇರಬೇಕು. ಆದರೆ, ಈ ರೆಸಾರ್ಟ್ ರಾಜ್ಯ ಹೆದ್ದಾರಿ ಸಮೀಪದಿಂದ ಸುಮಾರು 20 ರಿಂದ 30 ಮೀ ವ್ಯಾಪ್ತಿಯಲ್ಲಿದ್ದ ಕಾರಣ ಸಿವಿಲ್-7 ಲೈಸೆನ್ಸ್ ನೀಡಲು ಅವಕಾಶ ಇರಲಿಲ್ಲ. ಹೀಗಿದ್ದರೂ ನಿಯಮ ಮೀರಿ ಲೈಸೆನ್ಸ್ ನ್ನು ಪಡೆದು ರೆಸಾರ್ಟ್ ನಡೆಸಲಾಗುತ್ತಿತ್ತು.
ಅದ್ದರಿಂದ 2016-17ನೇ ಸಾಲಿಗೆ ಲೈಸೆನ್ಸ್ ನವೀಕರಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಈ ಬಗ್ಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮರೀಗೌಡ ಅವರು ಲೈಸೆನ್ಸ್ ಮಾಡಿಕೊಂಡುವಂತೆ ಅಧಿಕಾರಿಗಳಿಗೆ ಒತ್ತಡ ಹೇರಿದ್ದರು. ಒತ್ತಡಕ್ಕೆ ಮಣಿಯದ ಜಿಲ್ಲಾಧಿಕಾರಿ ಶಿಖಾ ಅವರು ಲೈಸೆನ್ಸ್ ನವೀಕರಣ ಮಾಡದೆ ಸಿವಿಲ್-7 ರದ್ದು ಪಡಿಸಿ ಆದೇಶ ಹೊರಡಿಸಿದ್ದರು.
ಇದರಿಂದ ತುಂಬಾ ಕೋಪಗೊಂಡಿದ್ದ ಮರೀಗೌಡ ಹಾಗೂ ಅವರ ಬೆಂಬಲಿಗರು ತಹಸೀಲ್ದಾರ್ ರನ್ನು ಬಿಡುಗಡೆ ಮಾಡುತ್ತಿಲ್ಲ ಎಂಬ ಕುಂಡುನೆಪ ಒಡ್ಡಿ ಜಿಲ್ಲಾಧಿಕಾರಿಗಳ ವಿರುದ್ಧ ಏಕವಚನದಲ್ಲಿ ನಿಂದಿಸಿದ್ದರು ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಯ ಆಪ್ತನೆಂಬ ಸದವಕಾಶವನ್ನು ಬಳಸಿಕೊಂಡು ಮರೀಗೌಡ ನಡೆಸುತ್ತಿರುವ ಅಕ್ರಮಗಳು ಇದೀಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಇದಲ್ಲದೆ, ಮರೀಗೌಡ ಅವರು, 32 ವರ್ಷಗಳ ಹಿಂದೆ ತಮ್ಮ ಮಾತನ್ನು ಕೇಳದ ಕಾರಣ ಮೈಸೂರು ತಾಲೂಕಿನ 8 ಕಾರ್ಯನಿರ್ವಾಹಕ ಅಧಿಕಾರಿಗಳನ್ನು ತಮ್ಮ ಪ್ರಭಾವದಿಂದ ವರ್ಗಾವಣೆ ಮಾಡಿದ್ದಾರೆಂದು ಆರೋಪಿಸಿದ್ದರು. ಅಲ್ಲದೆ, ತಮ್ಮದೇ ಅಧಿಕಾರ ನಡೆಯುವ ಸಲುವಾಗಿ ಪೊಲೀಸ್ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸೇರಿಸಿ ತಮ್ಮ ನಿವಾಸದಲ್ಲಿ ಅಕ್ರಮವಾಗಿ ಸಭೆಯೊಂದನ್ನು ಏರ್ಪಡಿಸಿ ಮಾತುಕತೆ ನಡೆಸಿದ್ದಾರೆಂದು ಹೇಳಿಕೊಂಡಿದ್ದರು.