ಪಿರಿಯಾಪಟ್ಟಣ: ಸ್ನಾನ ಮಾಡುವ ವೇಳೆ ಕಾಲು ಜಾರಿ ಬಿದ್ದು ಯುವತಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಚಾಮರಾಯನಕೋಟೆ ವ್ಯಾಪ್ತಿಯ ಹನುಮಂತರಾಯ ದೇವಸ್ಥಾನದ ಬಳಿಯ ಕಾವೇರಿ ನದಿಯಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನ ಅಂಜಲಿ(16) ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ.
ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮದಿಂದ ಅಂಜಲಿಯ ಸಂಬಂಧಿಗಳು ದೇವಸ್ಥಾನದಲ್ಲಿ ಹರಕೆ ತೀರಿಸಲು ಬುಧವಾರ ಬಂದಿದ್ದರು. ಈ ಸಮಯದಲ್ಲಿ ಕೊಣನೂರು ಗ್ರಾಮದವರೇ ಆದ ಶ್ರೀನಿವಾಸ್ ಅವರ ಪುತ್ರಿ ಅಂಜಲಿ ಮತ್ತು ಅವಳ ಸಂಬಂಧಿಗಳಾದ ಅನನ್ಯ, ಅನುಶ್ರೀ ಸೇರಿ ಮೂವರು ದೇವಸ್ಥಾನದ ಬಳಿಯಿರುವ ಹೊಳೆಯಲ್ಲಿ ಸ್ನಾನ ಮಾಡಲು ತೆರಳಿದ್ದು, ಈ ವೇಳೆ ಕಾಲು ಜಾರಿ ಬಿದ್ದಿದ್ದು, ನೀರಿನಲ್ಲಿ ಮುಳುಗಿದ ಅಂಜಲಿ ಸಾವನಪ್ಪಿದರೆ, ಜತೆಗಿದ್ದ ಅನನ್ಯ ಮತ್ತು ಅನುಶ್ರೀ ಅವರನ್ನು ಸ್ಥಳೀಯರು ನೀರಿನಿಂದ ಎಳೆದು ರಕ್ಷಿಸಿದ್ದಾರೆ.
ವಿಷಯ ತಿಳಿದ ಬೆಟ್ಟದಪುರ ಪೊಲೀಸ್ ಠಾಣೆಯ ಪಿಎಸ್ಐ ಡಿ.ಆರ್.ಜಯಸ್ವಾಮಿ, ಎಎಸ್ಐ ಸುರೇಶ್ ಸ್ಥಳಕ್ಕೆ ಆಗಮಿಸಿ, ಅಂಜಲಿಯ ತಂದೆ ಶ್ರೀನಿವಾಸ್ ಅವರಿಂದ ದೂರು ಪಡೆದು ದಾಖಲಿಸಿಕೊಂಡು, ಶವವನ್ನು ಹೊಳೆಯಿಂದ ಹೊರತೆಗೆಸಿ, ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಶವವನ್ನು ನೀಡಿದ್ದಾರೆ.
ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡಿದ್ದರಿಂದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.