ನಾಗಮಂಗಲ: ತೆಂಗಿನ ಮರದಲ್ಲಿ ಕಾಯಿ ಕೀಳುವ ಸಂದರ್ಭ ಹೆಜ್ಜೇನು ದಾಳಿ ಮಾಡಿದ ಪರಿಣಾಮ ರೈತ ಸಾವನ್ನಪ್ಪಿದ ಘಟನೆ ತಾಲೂಕಿನ ಕಸಬಾ ಹೋಬಳಿ ಹಾಲತಿ ಗ್ರಾಮದಲ್ಲಿ ನಡೆದಿದೆ.
ಹಾಲತಿ ಗ್ರಾಮದ ರೈತ ಎಚ್.ವಿ. ವೆಂಕಟೇಶ್(39) ಎಂಬವರೇ ಸಾವಿಗೀಡಾದ ದುರ್ದೈವಿ. ಇವರು ಮಧ್ಯಾಹ್ನ ಊರಿನ ತೋಟದಲ್ಲಿ ತೆಂಗಿನಕಾಯಿ ಕೀಳಲು ಯಂತ್ರವನ್ನು ಬಳಸಿ ಮರವನ್ನೇರಿದ ವೇಳೆ ಮರದಲ್ಲಿದ್ದ ಹೆಜ್ಜೇನು ದಾಳಿ ಮಾಡಿದೆ.
ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ವೇಗವಾಗಿ ಮರದಿಂದ ಇಳಿದ ವೆಂಕಟೇಶ್ ಸಮೀಪದಲ್ಲೇ ಹರಿಯುತ್ತಿದ್ದ ಹೇಮಾವತಿ ನಾಲೆಯಲ್ಲಿ ಮುಳುಗಿ ಅವುಗಳ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಆದರೂ ಅವು ಬಿಡದೆ ದಾಳಿ ಮಾಡಿವೆ. ಬಳಿಕ ತಪ್ಪಿಸಿಕೊಂಡು ಹೋಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದು ಮಲಗಿದ್ದಾಗ ರಾತ್ರಿ 3 ಗಂಟೆ ಸಮಯದಲ್ಲಿ ಸಾವಿಗೀಡಾಗಿದ್ದಾರೆ.
ಸೋಮವಾರ ಬೆಳಗ್ಗೆ ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಂದ ಗ್ರಾಮಸ್ಥರು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಮೃತದೇಹದ ಪರೀಕ್ಷೆಯ ನಂತರ ಶವವನ್ನು ಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಮೃತ ವೆಂಕಟೇಶ್ ಪತ್ನಿ ಶಾರದ ಸೇರಿದಂತೆ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.