ಮೈಸೂರು: ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ 17ನೇ ರಾಷ್ಟ್ರೀಯ ಜಾಂಬೂರಿ ಸಮಾವೇಶದಲ್ಲಿ ವಿವಿಧ, ವಿಭಿನ್ನ ಕಾರ್ಯಕ್ರಮಗಳು ನಡೆದವು. ಮಕ್ಕಳು ತಮ್ಮ ಶಕ್ತಿ, ಸಾಹಸಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಶಿಸ್ತು, ಸಾಮಾಜಿಕ ಸೇವೆ, ಭ್ರಾತೃತ್ವ, ಸಮಾನತೆ, ಏಕತೆ, ರಾಷ್ಟ್ರಭಕ್ತಿ, ಸಾಹಸ, ಕ್ರೀಡೆ, ಬುದ್ಧಿವಂತಿಕೆ, ಶ್ರದ್ಧೆ, ವಸ್ತು ಪ್ರದರ್ಶನ, ಕೌಶ್ಯಲ್ಯ ಪ್ರದರ್ಶನ, ವ್ಯಕ್ತಿ ಹಾಗೂ ವ್ಯಕ್ತಿತ್ವ ವನ್ನು ಪ್ರದರ್ಶಿಸಿದ ಜಾಂಬೂರಿಯ ಸುಮಾರು 30 ಸಾವಿರಕ್ಕೂ ಹೆಚ್ಚು ಪುಟಾಣಿಗಳು ಪಥಸಂಚಲನ, ಬ್ಯಾಂಡ್ ಪ್ರದರ್ಶನ, ವೈವಿಧ್ಯಮಯ ಸಾಂಸ್ಕೃತಿಕ ದರ್ಶನ ಹಾಗೂ ಸಾಹಸ ಚಟುವಟಿಕೆಗಳಲ್ಲಿ ಮಾತ್ರವಲ್ಲ ದೈಹಿಕವಾಗಿಯೂ ನಾವು ಸದೃಢರಾಗಿದ್ದೇವೆ ಎಂದು ಹಲವು ಕಾರ್ಯಕ್ರಮ ನಡೆಸಿಕೊಟ್ಟು ತಮ್ಮಲಿದ್ದ ಕಲೆಯನ್ನು ಉತ್ತಮವಾಗಿ ಪ್ರದರ್ಶಿಸಿದರು. ಮಲ್ಲಗಂಬ, ಹಗ್ಗದ ಮಲ್ಲಗಂಬ, ಕರಾಟೆ, ಯೋಗಾಸನ, ಮಾನವ ನಿರ್ಮಿತ ಪಿರಮಿಡ್ ಹೀಗೆ ಹಲವು ವೈವಿಧ್ಯಮಯ ಪ್ರದರ್ಶನಗಳಿಗೆ 17ನೇ ರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿ ಸಾಕ್ಷಿಯಾಯಿತು.
ದೈಹಿಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಗಮಿಸಿದ್ದ ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಬಿ.ಜಿ.ಸಂಗಮೇಶ್ವರ ಮಾತನಾಡಿ, ಮುಂದಿನ 20 ವರ್ಷದಲ್ಲಿ ಭಾರತದಲ್ಲಿ ಉದ್ಯೋಗ ದೊರೆಯುವ ಪ್ರಮಾಣ ಸಾಕಷ್ಟು ಕಡಿಮೆಯಾಗಲಿದೆ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಅತಂಕ ವ್ಯಕ್ತಪಡಿಸಿದರು.
ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳು ವಿದ್ಯಾಭ್ಯಾಸ ಮುಗಿಸಿದವರಿಗೆ ಪದವಿ ನೀಡಿ ಕಳುಹಿಸುತ್ತಿವೆ. ವಿದ್ಯಾರ್ಥಿಗಳು ಪದವಿ ಪತ್ರಗಳನ್ನು ಇಟ್ಟುಕೊಂಡರೆ ಉದ್ಯೋಗ ದೊರೆಯುವುದು ಮುಂದಿನ ದಿನಗಳಲ್ಲಿ ಆಸಾಧ್ಯವಾಗಲಿದೆ. ವಿವಿಗಳು ವ್ಯಕ್ತಿತ್ವ ವಿಕಸನ, ನಾಯಕತ್ವದ ಮೌಲ್ಯ, ಅಭಿವೃದ್ಧಿ ದೃಷ್ಟಿಯ ಮೇಲೆ ಕೇಂದ್ರೀಕರಿಸಿ ಪಠ್ಯಕ್ರಮಗಳನ್ನು ಸೃಷ್ಟಿಸಬೇಕು. ಉತ್ತಮ ಸಂವಹನವಿದ್ದರೆ ಉತ್ತಮ ಪ್ರಜೆಯಾಗಲು ಸಾಧ್ಯ. ಅಲ್ಲದೆ ದೇಶದಲ್ಲಿ 4 ಮಂದಿಯಿಂದ ಆರಂಭವಾದ ಸ್ಕೌಟ್ಸ್, ಗೈಡ್ಸ್ ಹಾಗೂ ಬುಲ್ಸ್ ಇಂದು 5 ಲಕ್ಷ ತಲುಪಿದೆ. ಸರಕಾರ ಸ್ಕೌಟ್ಸ್, ಗೈಡ್ಸ್ ಅನ್ನು ಪ್ರೌಢಶಾಲೆಯ ಮಟ್ಟದಿಂದ ಪಿಯುವರೆಗೆ ವಿಸ್ತರಣೆ ಮಾಡಬೇಕು. ಇಂತಹ ವ್ಯವಸ್ಥೆ ಹೆಚ್ಚಾದಷ್ಟು ಯುವ ಪೀಳಿಗೆಗಳಿಗೆಯಿಂದ ದೇಶ ಸಾಕಷ್ಟು ನಿರೀಕ್ಷಿಸಬಹುದು ಮಾತ್ರವಲ್ಲದೇ ಉತ್ತಮ ಯುವ ರಾಷ್ಟ್ರ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ದೇಶದ ನಾನಾ ಭಾಗಗಳಿಂದ ಆಗಮಿಸಿರುವ ಸ್ಕೌಟ್ಸ್ ಮತ್ತು ಗೈಡ್ಸ್ ನ 52 ತಂಡಗಳು ತಮ್ಮ ತಮ್ಮ ಸಂಪನ್ಮೂಲ ವ್ಯಕ್ತಿಗಳಿಂದ ಪಡೆದ ವಿವಿಧ ರೀತಿಯ ತರಬೇತಿಯನ್ನು ರಾಜ್ಯವಾರು ಸ್ಕೌಟ್ಸ್ ಮತ್ತು ಗೈಡ್ಸ್ ಬೇರೆ ಬೇರೆಯಾಗಿ ಹಾಗೂ ಒಂದೇ ತಂಡದಲ್ಲಿ ಪ್ರದರ್ಶಿಸಿದರು. ಕತ್ತಿವರಸೆ, ದೊಣ್ಣೆವರಸೆ, ಮಲ್ಲಗಂಬ, ಹಗ್ಗದಮಲ್ಲಗಂಬ, ಕರಾಟೆ, ಕೋಲಿನಿಂದ ಎದೆಯ ಮೇಲಿಟ್ಟ ತೆಂಗಿನ ಕಾಯಿಯನ್ನು ಹೊಡೆಯುವುದು, ಸಂಗೀತದ ಸಹಾಯದಿಂದ ವ್ಯಾಯಾಮ ಹೀಗೆ ಅನೇಕ ಕಾರ್ಯಕ್ರಮಗಳನ್ನು ನಿಗದಿಪಡಿಸಿದ್ದ 4 ನಿಮಿಷಗಳಲ್ಲಿ ವೇದಿಕೆಯಲ್ಲಿ ಉತ್ತಮವಾಗಿ ಪ್ರದರ್ಶಿಸಿದರು. ಯಾವ ತಂಡ ಹೆಚ್ಚು ಆಕರ್ಷಿಸುತ್ತದೆಯೋ ಆ ತಂಡಕ್ಕೆ ಅಂಕಗಳ ಆಧಾರದ ಮೇಲೆ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ.
ಸಾಮಾನ್ಯವಾಗಿ ದೈಹಿಕ ಕಸರತ್ತು ನಡೆಸುವವರು ಜಿಮ್ ಹಾಗೂ ಏರೋಬಿಕ್ ತರಗತಿಗಳಲ್ಲಿ ಹೆಚ್ಚು ಧ್ವನಿವರ್ಧದ ಸದ್ದಿನಲ್ಲಿ ಕಸರತ್ತು ಮಾಡುತ್ತಾರೆ. ಆದರೆ ಜಾಂಬೂರಿಯ ಪುಟಾಣಿಗಳು ಸಂಗೀತದ ಸಹಾಯದಿಂದ ಮಾನವ ನಿರ್ಮಿತ ಪಿರಮಿಡ್, ಕರಾಟೆ, ಮಲ್ಲಗಂಬವನ್ನು ಆಕರ್ಷಕವಾಗಿ ಮಾಡಿದರು. ಹರಿಯಾಣದ ಶಿಬಿರಾರ್ಥಿಗಳು ಹರೇ ರಾಮ ಹರೇ ಕೃಷ್ಣ ಎಂಬ ಹಾಡಿನ ಮೂಲಕ ದೇಹದಲ್ಲಿ ಕೊಬ್ಬುಕರಗಿಸಲು ಮಾಡಬೇಕಾದ ವ್ಯಾಯಾಮಗಳನ್ನು ಮಾಡಿ ನೀವು ಮಾಡಿದರೆ ಉತ್ತಮ ಎಂಬ ಸಂದೇಶ ನೀಡಿದರು.
ಸಂಗೀತವನ್ನು ಬಳಸಿಕೊಳ್ಳಬಹುದು ಎಂಬ ದೃಷ್ಟಿಯಿಂದ ಹಲವು ರಾಜ್ಯಗಳು ದೈಹಿಕ ಪ್ರದರ್ಶನದಲ್ಲಿ ವೈವಿಧ್ಯತೆಯನ್ನು ಸಾರದೆ ಬೆರಳೆಣಿಕೆಯ ಸಾಹಿತ್ಯದ ಸಾಲುಗಳನ್ನು ಉಪಯೋಗಿಸಿಕೊಂಡರು. ಅದರಲ್ಲಿಯೂ ಹೆಚ್ಚಾಗಿ ಸ್ಲಂಡಾಗ್ ಮಿಲೇನಿಯರ್ ಹಾಗೂ ಜೋಧಾ ಅಕ್ಬರ್ ಚಿತ್ರದ ಹಾಡುಗಳು ಕೇಳುಗರ ಕಿವಿಯನ್ನು ಮತ್ತೆ ಮತ್ತೆ ತಾಕಿದವು.
ಉತ್ತರ ಪ್ರದೇಶ, ಗುಜರಾತ್, ತಮಿಳುನಾಡು, ಒರಿಸ್ಸಾ ರಾಜ್ಯಗಳು ಮಾನವ ನಿರ್ಮಿತ ಪಿರಮಿಡ್ ಗಳನ್ನು ನಿರ್ಮಿಸಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವದಂತಹ ಸುಂದರ ಕ್ಷಣಗಳನ್ನು ನೆನಪು ಮಾಡಿದರು.
ಮಿಜೋರಂ ರಾಜ್ಯದ ಮಕ್ಕಳು ಸಂಗೀತದೊಂದಿಗೆ ಕರಾಟೆಯ ಪಟ್ಟುಗಳನ್ನು ಹಾಕಿದರು. ಜೊತೆಯಲ್ಲಿ ಹೆಣ್ಣು ಮಕ್ಕಳು ಕರಾಟೆ, ಕುಸ್ತಿ ಕಲಿತು ಆತ್ಮ ರಕ್ಷಣೆಗೆ ಮುಂದಾಗಬೇಕು. ತನ್ಮೂಲಕ ಸ್ವರಕ್ಷಣೆ ಮಾಡಿಕೊಳ್ಳಬೇಕು ಎಂಬ ಜಾಗೃತಿ ನೀಡಿದರು.
ಎಲ್ಲಾ ರಾಜ್ಯಗಳು ಪಿರಮಿಡ್, ವ್ಯಾಯಾಮ ಹಾಗೂ ಯೋಗ ಪ್ರದರ್ಶಿಸಿದರೆ, ರಾಜಸ್ತಾನ ದೈಹಿಕ ಪ್ರದರ್ಶನದಲ್ಲಿ ಯುದ್ಧದ ಸನ್ನಿವೇಶವನ್ನು ನಿರ್ಮಿಸಿತ್ತು. ಪುಟ್ಟ ಪುಟ್ಟ ಮಕ್ಕಳು ಯುದ್ಧಕ್ಕೆ ಬೇಕಾದ ಉಪಕರಣಗಳನ್ನು ವೇದಿಕೆಯಲ್ಲಿ ಉತ್ತಮವಾಗಿ ಉಪಯೋಗಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅಂತೆಯೇ ಕೇರಳದ ಸ್ಕೌಟ್ಸ್ ಮತ್ತು ಗೈಡ್ಸ್ ನ ಶಿಬಿರಾರ್ಥಿಗಳು ವೇದಿಕೆಯಲ್ಲಿ ವ್ಯಾಯಾಮದ ಮುಖಾಂತರ ಸೂರ್ಯಕಾಂತಿಯ ಹೂವನ್ನು ಅಲ್ಲಿ ಬಿಂಬಿಸಿದರು.
ರಾಜ್ಯದ ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಕರ್ನಾಟಕದ ಇತಿಹಾಸ, ರಾಷ್ಟ್ರಪಕ್ಷಿ, ರಾಷ್ಟ್ರದ ಹೂವು, ಆಶೋಕ ಚಕ್ರ, ಚಿಟ್ಟೆ ಹಾಗೂ ಚಾಮುಂಡೇಶ್ವರಿಯನ್ನು ಕುರಿತಂತೆ ಸೀರೆಯನ್ನು ಉಪಕರಣವಾಗಿ ಬಳಸಿಕೊಂಡು ಸುಂದರವಾಗಿ ಚಿತ್ರಿಸಿದರು.