ಮೈಸೂರು: ಕಬಿನಿ, ಕಾವೇರಿ ಜಲಾಶಯದ ನೀರನ್ನು ತಮಿಳುನಾಡಿಗೆ ಹರಿಸಿದ ಪರಿಣಾಮ ಅಚ್ಚುಕಟ್ಟು ರೈತರ ಬೆಳೆಗಳು ಒಣಗುವಂತಾಗಿದೆ ಕಬಿನಿ ಅಚ್ಚುಕಟ್ಟು ರೈತರಿಗೆ ಭತ್ತದ ಬೆಳೆ ನಷ್ಟಕ್ಕೆ ನಷ್ಟ ಪರಿಹಾರ ಎಕರೆಗೆ ರೂ.25ಸಾವಿರ ಕೂಡಲೇ ನೀಡಬೇಕು ಸರ್ಕಾರಗಳ ನಿರ್ಲಕ್ಷ್ಯದಿಂದ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಒತ್ತಾಯಿಸಿ ಸಾವಿರಾರು ರೈತರು ಮೈಸೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದರು.
ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ ಕಬ್ಬು ಬೆಳೆದ ರೈತರಿಗೆ ನ್ಯಾಯಯುತ ದರ ನಿಗದಿ ಮಾಡಿ ಹಣ ಕೊಡಿಸಬೇಕಾದ ಸರ್ಕಾರ, ಕ್ಷೇತ್ರದ ಮುಖ್ಯಮಂತ್ರಿ, ಜಿಲ್ಲಾ ಮಂತ್ರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು. ತಾವು ಒಂದು ವಾರದಲ್ಲಿ ತುರ್ತು ಸಭೆ ಕರೆದು ಕ್ರಮ ಕೈಗೊಳ್ಳದಿದ್ದರೆ ತಮ್ಮ ಕಚೇರಿ ಮುಂದೆ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಕಬ್ಬು ದರ ನಿಗದಿ ಹಾಗೂ ಕಬಿನಿ, ಕಾವೇರಿ ನೀರಿಗಾಗಿ ಹೋರಾಟ ಮಾಡಿದ ರೈತರ ಮೇಲಿನ ಮೊಕದ್ದಮೆಗಳನ್ನು ಕೈಬಿಡಬೇಕು. ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕೂಡಲೇ 30ಕೋಟಿ ಅನುದಾನ ಸರ್ಕಾರದ ವತಿಯಿಂದ ನೀಡಿ ಆರಂಭಿಸಬೇಕು, ಬ್ಯಾಂಕುಗಳು ರೈತರ ಕಬ್ಬಿನ ಹಣ ಸಾಲಕ್ಕೆ ಜಮಾ ಮಾಡುವುದು ಬರಗಾಲದ ಕಾರಣದಿಂದ ನಿಲ್ಲಬೇಕು. ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ನ್ನು ಸತತ 10ಗಂಟೆಗಳ ಕಾಲ ಪೂರೈಸಬೇಕು ಎಂದು ಒತ್ತಾಯಿಸಿದರು.