ಚಾಮರಾಜನಗರ: ಗುಂಡ್ಲುಪೇಟೆ ವಿಧಾನ ಸಭೆ ಉಪಚುನಾವಣಿ ಹಿನ್ನಲೆಯಲ್ಲಿ ಅಬಕಾರಿ ಹಾಗೂ ಸೆಕ್ಟರ್ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿದ್ದು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾರೆ.
ಅಕ್ರಮವಾಗಿ ಸಂಗ್ರಹಿಸಲಾಗಿದ ಮದ್ಯ ಹಾಗೂ ಕಾರ್ಯಕರ್ತರಿಗೆ ಹಂಚಲು ಸಿದ್ದಪಡಿಸಿದ್ದ ತರಕಾರಿ ಬಾತ್ ವಶಪಡಿಸಿಕೊಂಡಿದ್ದಾರೆ.
ಕಗ್ಗಳ ಗ್ರಾಮದಲ್ಲಿ ದೊಡ್ಡನಾಯಕ ಎಂಬುವರಿಂದ 1.440 ಲೀಟರ್ ಹಾಗೂ ರಾಚನಾಯಕ ಎಂಬುವರಿಂದ 1.800 ಲೀಟರ್ ಮದ್ಯ, ತೊಂಡವಾಡಿ ಗ್ರಾಮದಲ್ಲಿ ರಾಜು ಎಂಬುವರಿಂದ 1.080 ಲೀಟರ್ ಮದ್ಯ, ಬೇಗೂರು ಗ್ರಾಮದಲ್ಲಿ ಸಂತೋಷ್ ಎಂಬುವರಿಂದ 1.080 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.
ಕಬ್ಬಹಳ್ಳಿ ಗ್ರಾಮದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಗೆ ತಯಾರು ಮಾಡಿದ್ದ ತರಕಾರಿ ಬಾತ್ ನ್ನು ವೇದಿಕೆ ಹಿಂಭಾಗದಲ್ಲಿದ್ದ ಕೆ.ಎಂ.ಸುಬ್ಬಣ್ಣ ಅವರ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ನಳಿನ್ ಅತುಲ್ ತಿಳಿಸಿದ್ದಾರೆ.