ಮೈಸೂರು: ನಂಜನಗೂಡು ಉಪ ಚುನಾವಣೆ ಸಮರ ಜೋರಾಗತೊಡಗಿದ್ದು, ಆರೋಪ ಪ್ರತ್ಯಾರೋಪಗಳು ಜೋರಾಗಿಯೇ ನಡೆದಿವೆ.
ರಾಜ್ಯದಲ್ಲಿ ದಲಿತ ಸಿಎಂ ಕೂಗು ಬಂದಾಗ ದಲಿತ ಸಿಎಂ ಮಾಡಲು ಹೊರಟ ಪರಮೇಶ್ವರ್ ಜೊತೆಗೆ 5 ಜನ ಎಂಎಲ್ಎ ಕರೆತರಲು ಆಗಲಿಲ್ಲ. ಈಗ 25 ಜನ ಬಿಜೆಪಿ ಶಾಸಕರನ್ನು ಕರೆತರುವರೇ ಎಂದು ಪ್ರಸಾದ್ ಪರಮೇಶ್ವರ್ ಅವರ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ.
ಬಿಜೆಪಿಯ 25 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹೇಳಿಕೆಯನ್ನು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಲೇವಡಿ ಮಾಡಿದ್ದಾರೆ.
ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡ ಪರಮೇಶ್ವರ್ ಆ ರೀತಿ ಹೇಳಿವವರಲ್ಲ. ಯಾವ ಕಾರಣಕ್ಕೆ ಬರುತ್ತಾರೆ ಎಂಬುದನ್ನು ಅವರನ್ನೇ ಕೇಳಿಕೊಳ್ಳಿ ಎಂದರು. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಅಂದಿದ್ದಾರೆ.
ನಂಜನಗೂಡು ಹಾಗೂ ಗುಂಡ್ಲುಪೇಟೆ ಪ.ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷೆಗೆ ಮೀರಿ ಬೆಂಬಲ ಸಿಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ಎಷ್ಟೇ ಸದಸ್ಯರು ಚುನಾವಣೆ ಪ್ರಚಾರಕ್ಕೆ ಬಂದರೂ ನಾವು ಹೆದರುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
ನಾಳೆ ನಾಮಪತ್ರ ಸಲ್ಲಿಕೆಯಾದ ನಂತರ ಬಿಜೆಪಿಯಿಂದ ಕೂಡ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಈಶ್ವರಪ್ಪ, ಸೇರಿದಂತೆ ನಾಯಕರ ದಂಡೇ ಪ್ರಚಾರದಲ್ಲಿ ತೊಡಗಲಿದೆ ಎಂದಿದ್ದಾರೆ.
ಇದೇ ವೇಳೆ ಐಟಿ ದಾಳಿ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಎಷ್ಟು ಜನ ಶ್ರೀಮಂತರಿದ್ದಾರೆ ಎಂಬುದನ್ನು ಅವರೇ ಪಟ್ಟಿ ಮಾಡಿ ರೇಡ್? ಮಾಡಿಸಲಿ ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿಗಳಿಗೆ ಜನರ ಕಷ್ಟ ಬೇಕಾಗಿಲ್ಲ. ಚುನಾವಣೆಯಲ್ಲಿ ಅಧಿಕಾರ ದುರುಪಯೋಗವಾಗುತ್ತಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಬಿಎಸ್ವೈ ಹೇಳಿದ್ದಾರೆ.