ಮೈಸೂರು: ಏ. 10ರಿಂದ ಮೇ.10ರವರೆಗೆ ಸಮಾನತೆ ಚಿಣ್ಣರಮೇಳ-2017ನ್ನು ಆಯೋಜಿಸಲಾಗಿದೆ ಎಂದು ರಂಗಾಯಣದ ಪ್ರಭಾರ ನಿರ್ದೇಶಕ ದಯಾನಂದ ತಿಳಿಸಿದರು.
ನಗರದ ಕಲಾಮಂದಿರದ ರಂಗಾಯಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಲ್ಪನೆಗಳು ಮುಕ್ಕಾಗದ ಹಾಗೆ ಅವರ ಭಾಷೆ, ಭಾವಗಳನ್ನು ಅರ್ಥಮಾಡಿಕೊಂಡು ಅವರದ್ದೇ ಲೋಕವನ್ನು ಒಲವಿನ ಒಡನಾಟದೊಂದಿಗೆ ಉಲ್ಲಾಸ, ಸಂತಸದ ವಾತಾವರಣವನ್ನು ನಿರ್ಮಿಸಿ ಮಕ್ಕಳು ನಲಿಯುತ್ತ ಕಲಿಯಬೇಕೆನ್ನುವ ಉದ್ದೇಶದಿಂದ ಸಮಾನತೆ-ಚಿಣ್ಣರಮೇಳ-2017ನ್ನು ಆಯೋಜಿಸಲಾಗಿದೆ.
ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದಿರುವ ಹುಬ್ಬಳ್ಳಿಯ ಸಿಯಾ ಖೋಡೆ ಮೇಳವನ್ನು ಉದ್ಘಾಟಿಸಲಿದ್ದಾರೆ. 14 ವರ್ಷ ವಯೋಮಿತಿಯೊಳಗಿನ ಚಿಣ್ಣರಿಗಾಗಿ ಏರ್ಪಡಿಸುವ ಈ ಚಿಣ್ಣರ ಮೇಳವು 19ನೇ ಚಿಣ್ಣರಮೇಳವಾಗಿದ್ದು, ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ಆಚರಿಸಲು ಮಕ್ಕಳ ಲೋಕವನ್ನು ಪರಿಣಾಮಕಾರಿಯಾಗಿ ಸೃಷ್ಟಿಸಲು ಮುಂದಾಗಿದೆ. ಮಕ್ಕಳೊಂದಿಗೆ ಅತಿ ಸೂಕ್ಷ್ಮ ವರ್ತನೆ ಅಗತ್ಯವಾಗಿದೆ. ಈ ಚಿಣ್ಣರ ಮೇಳದಲ್ಲಿ ಕಲಾಪ್ರಶಸ್ತಿ ವಿಜೇತ ಅಂತರರಾಷ್ಟ್ರೀಯ ಯೋಗಪಟು ಖುಷಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಮೇಳದಲ್ಲಿ ಸುಮಾ ರಾಜ್ ಕುಮಾರ್ ಅವರಿಂದ ಮ್ಯಾಜಿಕ್ ಹಾಗೂ ಮಾತನಾಡುವ ಗೊಂಬೆ ಪ್ರದರ್ಶನ, ಸಿವಿ ನಾಗರಾಜ್ ಅವರಿಂದ ಆಹಾರ-ಆರೋಗ್ಯ ಕುರಿತ ಮುಖಾಮುಖಿ, ವಾಸು ದೀಕ್ಷಿತ ಅವರಿಂದ ವಚನ ಗಾಯನ, ಡಾ.ಹಿ.ಶಿ.ರಾಮಚಂದ್ರೇಗೌಡ ಅವರಿಂದ ಕಥೆ ಹೇಳುವ ಕಾರ್ಯಕ್ರಮ, ಕೃಪಾಪಡ್ಕೆಯವರಿಂದ ಜಾನಪದ, ಮೈಸೂರು ವಿವಿ ಸಸ್ಯಶಾಸ್ತ್ರ ವಿಭಾಗದ ಪ್ರೊ.ಜಿ.ಆರ್.ಜನಾರ್ದನ್ ಅವರಿಂದ ಸಸ್ಯಪ್ರಪಂಚ ಕುರಿತಂತೆ ಮುಖಾಮುಖಿ ಹಾಗೂ ಸಾಮೂಹಿಕ ನೃತ್ಯ ಪ್ರಾತ್ಯಕ್ಷಿಕೆ, ಕೆ.ಮನು ಅವರಿಂದ ಪರಿಸರ ನಡಿಗೆ, ಪ್ರಾಚ್ಯವಸ್ತು ಸಂಶೋಧನೆಗಳು ಮತ್ತು ಪಾರಂಪರಿಕ ಇಲಾಖೆ ವತಿಯಿಂದ ಪಾರಂಪರಿಕ ನಡಿಗೆ ಮತ್ತು ಮಾಹಿತಿ, ಪೊಲೀಸ್ ಇಲಾಖೆಯ ಶ್ವಾನದಳದಿಂದ ಡಾಗ್ ಶೋ ಪ್ರದರ್ಶನ, ಅಗ್ನಿಶಾಮಕ ದಳದಿಂದ ಅಗ್ನಿಶಾಮಕ ಪ್ರಾತ್ಯಕ್ಷಿಕೆ, ಸಮಾನತೆ ಕುರಿತು ಬಸವ ಜಯಂತಿಯಂದು ಲತಾ ಮೈಸೂರು ಅವರಿಂದ ವಿಶೇಷ ಉಪನ್ಯಾಸ, ಪರಿಣಿತರಿಂದ ಡ್ರಾಯಿಂಗ್, ಮಾಸ್ಕ್ ಮೇಕಿಂಗ್ ತರಗತಿಗಳು, ನುರಿತ ರಂಗನಿರ್ದೇಶಕರಿಂದ ಮೇಳದ ಮಕ್ಕಳಿಗೆ ರಂಗ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.