ಮೈಸೂರು: ಒಂದು ಸೋಲಿಗೋಸ್ಕರ ಆಳಿಗೊಂದು ಕಲ್ಲು ಒಡೆಯುವುದು ಒಳ್ಳೆಯದಲ್ಲ, ಮುಂದಿನ ವರ್ಷ ಏಪ್ರಿಲ್ ನಲ್ಲಿ ನಿಮ್ಮ ಫೇಸ್ಬುಕ್ ಗೋಡೆ ಅಭಿನಂದನೆಗಳಿಂದ ತುಂಬಿರುತ್ತದೆ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ಉಪಚುನಾವಣೆ ಸೋಲಿನ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ.
ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಯ ಫಲಿತಾಂಶದ ಬಳಿಕ ಪ್ರತಾಪ್ ಸಿಂಹ ಟ್ವೀಟರ್ ನಲ್ಲಿ ಕಾಂಗ್ರೆಸ್ ಗೆ ಅಭಿನಂದನೆಗಳು ಸಲ್ಲಿಸಿದ್ದು ವಿಶೇಷವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಪ್ರತಾಪ್ ಸಿಂಹ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ಸಾಲುಗಳು:
‘ಒಂದು ಸೋಲಿಗೋಸ್ಕರ ಆಳಿಗೊಂದರಂತೆ ಕಲ್ಲು ಹೊಡೆಯುವ ಪ್ರವೃತ್ತಿ ಒಳ್ಳೆಯದಲ್ಲ. ಸತತ ಸೋಲುಗಳನ್ನು ಹಾಗೂ ಸ್ವಂತ ಸೋಲನ್ನು ಜೀರ್ಣಿಸಿಕೊಂಡು ಇದೇ ಯಡಿಯೂರಪ್ಪನವರು 2008ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ದೇಶಾದ್ಯಂತ ನೆಲಕಚ್ಚಿದಾಗಲೂ ಬಿ.ಎಸ್.ವೈ. ಕರ್ನಾಟಕದಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 19 ಎಂಪಿ ಸೀಟ್ ಗೆಲ್ಲಿಸಿದ್ದರು ಎಂಬುದನ್ನು ಮರೆತು ಮಾತನಾಡಬೇಡಿ. ಈ ಸೋಲನ್ನು ಪಾಠವಾಗಿ ಖಂಡಿತ ತೆಗೆದುಕೊಳ್ಳುತ್ತೇವೆ. ಮುಂದಿನ ವರ್ಷ ಇದೆ ಏಪ್ರಿಲ್ ನಲ್ಲಿ ನಿಮ್ಮ ಫೇಸ್ಬುಕ್ ಗೋಡೆ ಅಭಿನಂದನೆಗಳಿಂದ ತುಂಬಿರುತ್ತದೆ. ನಿಮ್ಮ ಆಶೀರ್ವಾದದೊಂದಿಗೆ ವಿಶ್ವಾಸವಿಡಿ. ಸೋತ ಈ ಕ್ಷಣದಲ್ಲಿ ನಮಗೆ ಆತ್ಮವಿಶ್ವಾಸ ತುಂಬಿ’ ಎಂದು ಬರೆದುಕೊಂಡಿರುವುದು ಈಗ ವೈರಲ್ ಆಗಿದೆ.