ಚಾಮರಾಜನಗರ: ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಪ್ರಸಾದಕ್ಕೆ ವಿಷ ಬೆರೆಸಿ 17 ಮಂದಿ ಸಾವಿಗೆ ಕಾರಣರಾದ ಬಂಧಿತ ಆರೋಪಿಗಳ ವಿಚಾರಣೆಯನ್ನು ನ್ಯಾಯಾಧೀಶರು ಜ.29ಕ್ಕೆ ಮುಂದೂಡಿದ್ದಾರೆ. ಜತೆಗೆ ಆರೋಪಿಗಳ ಪರ ಯಾವುದೇ ವಕೀಲರು ವಕಾಲತ್ತು ವಹಿಸಲು ಮುಂದೆ ಬಾರದಿರುವುದು ವಿಶೇಷವಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸುಳ್ವಾಡಿ ಗ್ರಾಮದ ಹೊರ ವಲಯದಲ್ಲಿರುವ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಕಳೆದ ಡಿಸೆಂಬರ್ 14ರಂದು ವಿಷ ಮಿಶ್ರಿತ ಪ್ರಸಾದ ತಯಾರಿಸಿ ಅಮಾಯಕ ಭಕ್ತರಿಗೆ ವಿತರಣೆ ಮಾಡಿ 17 ಮಂದಿ ಸಾವನ್ನಪ್ಪಿ, 107 ಮಂದಿ ಅಸ್ವಸ್ಥರಾಗಲು ಕಾರಣರಾದ ದೇವಾಲಯದ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ ಮತ್ತು ನಾಗದೇವಾಲಯದ ಅರ್ಚಕ ದೊಡ್ಡಯ್ಯ, ಟ್ರಸ್ಟ್ ಮ್ಯಾನೇಜರ್ ಮಾದೇಶ್ ಅವರಗಳನ್ನು ಮೈಸೂರಿನ ಕಾರಾಗೃಹದಿಂದಲೇ ವೀಡಿಯೋ ಕಾನ್ಫೆರೆನ್ಸ್ ಮೂಲಕ ನ್ಯಾಯಾಧೀಶರು ವಿಚಾರಣೆ ನಡೆಸಿದ್ದಾರೆ.
ಬಂಧಿತ ಆರೋಪಿಗಳ ಮೇಲೆ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಸಂತ್ರಸ್ಥರಿಗೆ ಪರಿಹಾರ ನೀಡಲಾಗಿದೆಯಾ ಎಂದು ಈ ವೇಳೆ ನ್ಯಾಯಾಧೀಶರು ಪರಿಶೀಲಿಸಿದರು.
ನ್ಯಾಯಾಲಯದಲ್ಲಿ ನ್ಯಾಯಾಧೀಶರು ನೇರವಾಗಿ ಮೈಸೂರು ಕಾರಾಗೃಹದಲ್ಲಿರುವ ಆರೋಪಿಗಳೊಂದಿಗೆ ವಿಚಾರಣೆ ನಡೆಸಿದರು.
ಈ ವೇಳೆ ನಾಲ್ವರು ಆರೋಪಿಗಳನ್ನು ತಮ್ಮ ಪರ ಯಾರಾದರೂ ವಕಾಲತ್ತು ವಹಿಸುತ್ತಾರಾ ಎಂದು ಆರೋಪಿಗಳನ್ನು ಪ್ರಶ್ನಿಸಿದ್ದು, ಇದಕ್ಕೆ ನಾಲ್ವರೂ ಆರೋಪಿಗಳು ಹತ್ತು ದಿನಗಳ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಜ.29ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.
ಬಂಧಿತ ಆರೋಪಿಗಳ ಪರವಾಗಿ ವಕೀಲರು ವಕಾಲತು ವಹಿಸಲಿಲ್ಲ, ಅಲ್ಲದೆ ಚಾಮರಾಜನಗರ ಮೈಸೂರು ಜಿಲ್ಲೆಯ ವಕೀಲರ ಸಂಘದವರು ಮಾನವೀಯ ದೃಷ್ಟಿಯಿಂದ ಸುಳ್ವಾಡಿ ದುರಂತದ ಆರೋಪಿಗಳಿಗೆ ವಕಾಲತ್ತು ವಹಿಸುವುದಿಲ್ಲ ಎಂದು ಈಗಾಗಲೇ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಆರೋಪಿಗಳ ಪರ ಯಾವುದೇ ವಕೀಲರು ಇಲ್ಲಿವರಗೆ ವಕಾಲತ್ತು ವಹಿಸಲು ಮುಂದಾಗಿಲ್ಲ.