ಮೈಸೂರು: ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸುವ ಕಾರ್ಯವನ್ನು ಸಿಬಿಐ, ಇಡಿ ಸಂಸ್ಥೆಗಳ ಮೂಲಕ ಬಿಜೆಪಿಯವರು ಮಾಡುತ್ತಿದ್ದಾರೆಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಮನೆ ಮೇಲೆ ಮಾತ್ರ ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ದಾಳಿ ನಡೆಸಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಕಂಡು ಹೆದರಿ ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂತಹ ನೀಚ ರಾಜಕೀಯ ಮಾಡುತ್ತಿವೆ. ಕಾಂಗ್ರೆಸ್ ಪಕ್ಷ ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ನರೇಂದ್ರ ಮೋದಿಯವರೇ ನಿಮಗೆ ನೈತಿಕತೆ ಇದ್ದರೆ ಮೊದಲು ಬಿಜೆಪಿ ಮುಖಂಡರುಗಳ ಹಗರಣವನ್ನು ತನಿಖೆಗೆ ಒಳಪಡಿಸಲು ಆದೇಶಿಸಿ ಎಂದು ಆಗ್ರಹಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿವಾಸದ ಮೇಲೆ ದಾಳಿ ಮಾಡಿದ ಸಿಬಿಐಗೆ ಚೋರ್ ಬಚಾವ್ ಇನ್ವೆಸ್ಟಿಗೇಷನ್ ಎಂದು ಹೊಸ ವ್ಯಾಖ್ಯಾನ ನೀಡಿದ ಅವರು ಬಿಜೆಪಿಯವರ ಮನೆಗಳ ಮೇಲೆ ಸಿಬಿಐ ದಾಳಿ ಮಾಡಲಿ. ಕೋಟಿ ಕೋಟಿ ಹಣ ಸಿಗದಿದದ್ದರೆ ಕೇಳಿ ಎಂದು ಸಿಬಿಐಗೆ ಚಾಲೆಂಜ್ ಹಾಕಿದರು. ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತ. ಸಿಬಿಐ ಇದೀಗ ಚೋರ್ ಬಚಾವ್ ಇನ್ವೆಸ್ಟಿಗೇಷನ್ ಆಗಿದೆ. ಕೇಂದ್ರ ಬಿಜೆಪಿ ಸರ್ಕಾರ ಐಟಿ, ಸಿಬಿಐ, ಇಡಿ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸುವ ಕಾರ್ಯ ಮಾಡುತ್ತಿದೆ. ಡಿ.ಕೆ. ಶಿವಕುಮಾರ್ ಓರ್ವ ಉದ್ಯಮಿಯೂ ಸಹ ಹೌದು. ಹೀ ಇಸ್ ಎ ರಿಯಲ್ ಎಸ್ಟೇಟ್ ಡೆವಲಪರ್. ಅವರ ಮಾಲೀಕತ್ವದಲ್ಲಿ ಹಲವಾರು ಪವರ್ ಪ್ಲಾಂಟ್ ಉದ್ದಿಮೆಗಳು, ಶೈಕ್ಷಣಿಕ ಸಂಸ್ಥೆಗಳಿವೆ. ಅವುಗಳ ಮೂಲಕ ಡಿಕೆಶಿಯವರು ಆದಾಯ ಗಳಿಸುತ್ತಿದ್ದಾರೆ. ಈ ಆದಾಯದ ಮೂಲವನ್ನು ತನಿಖೆ ಮಾಡುವ ಅಧಿಕಾರ ಸಿಬಿಐಗೆ ಇರುವುದಿಲ್ಲ. ಈಗಾಗಲೇ ಅವರ ಆಸ್ತಿ ಗಳಿಕೆ ಪ್ರಕರಣvನ್ನು ಇಡಿ ನಿರ್ವಹಿಸುತ್ತಿದೆ ಎಂದು ಹೇಳಿದರು.
ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಚ ರಾಜಕೀಯ ಮಾಡುತ್ತಿದೆ. ನಾನು ಈಗಲೂ ಚಾಲೆಂಜ್ ಮಾಡುತ್ತೇನೆ. ಬಿಜೆಪಿಯವರ ಮನೆಗಳ ಮೇಲೆ ಸಿಬಿಐ ದಾಳಿ ಮಾಡಲಿ. ಕೋಟಿ ಕೋಟಿ ಹಣ ಸಿಗದಿದ್ದರೆ ಕೇಳಿ ಎಂದು ಸಿಬಿಐ ಮೇಲೆ ಎಂ ಲಕ್ಷ್ಮಣ್ ಸವಾಲು ಹಾಕಿ ಸಿಬಿಐ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಹರಿಹಾಯ್ದರು.