ಮೈಸೂರು: 2019ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ರಾಜ್ಯ ಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಲ್ಲಿ ಒಂದಾದ ಲಿಂ.ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿಯು ಯುವ ಲೇಖಕಿ ಸುಮ ಚಂದ್ರಶೇಖರ್ ರಚಿಸಿರುವ ಗಾಂಧಿ ವ್ಯಕ್ತಿತ್ವ ದರ್ಶನದ ‘ಸತ್ಯ ಪಥದ ನಿತ್ಯ ಸಂತ’ ಕೃತಿಗೆ ಸಂದಿದೆ.
ಬೆಂಗಳೂರಿನ ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಅಜಕ್ಕಳ ಗಿರೀಶ್ ಭಟ್ ರವರು ಪ್ರಶಸ್ತಿ ಫಲಕ ನೀಡಿ ಗೌರವಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ ದ ಗೌರವ ಕಾರ್ಯದರ್ಶಿ ಕೆ.ರಾಜ್ಕುಮಾರ್ ವೇದಿಕೆಯಲ್ಲಿದ್ದರು.
ಸದರಿ ಕೃತಿಯು ಮಹಾತ್ಮ ಗಾಂಧೀಜಿ 150ನೇ ಜಯಂತಿ ವರ್ಷಾಚರಣೆಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವ ಬರಹಗಾರರಿಗೆ ಪ್ರೋತ್ಸಾಹ ಧನ ಯೋಜನೆಯಡಿಯಲ್ಲಿ ಪ್ರಕಟವಾಗಿದ್ದು, 18 ಅಧ್ಯಾಯಗಳಲ್ಲಿ ಮಹಾತ್ಮ ಗಾಂಧೀಜಿಯವರ ಜೀವನ-ಸಂದೇಶಗಳ ಕುರಿತು ರಚಿಸಿರುವ ಲೇಖನಗಳ ಸಂಗ್ರಹವಾಗಿದೆ.
ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಭರವಸೆಯ ಯುವ ಬರಹಗಾರ್ತಿ ಸುಮ ಚಂದ್ರಶೇಖರ್ರವರ ಅನೇಕ ಲೇಖನಗಳು ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಗಾಂಧಿಸ್ಮೃತಿ ಪುರಸ್ಕಾರ ಮತ್ತು ಕನ್ನಡ ಮಾಣಿಕ್ಯ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.