ಮೈಸೂರು: ರೈಲ್ವೆ ಇಲಾಖೆಯ ಶೇ. 60 ಭಾಗವನ್ನು ಈಗಾಗಲೇ ಖಾಸಗೀಕರಣಗೊಳಿಸಲಾಗಿದ್ದು ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ಇಡೀ ದೇಶವನ್ನೇ ಮಾರುವ ಕೆಲಸ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 34 ಪ್ರಮುಖ ಸಾರ್ವಜನಿಕ ವಲಯಗಳನ್ನು ಇಲ್ಲಿಯವರೆಗೆ ಖಾಸಗೀಕರಣ ಮಾಡಲಾಗಿದೆ. ಈಗಾಗಲೇ ದೇಶದಲ್ಲಿ 70 ರೈಲ್ವೆ ನಿಲ್ದಾಣಗಳನ್ನು 3 ವರ್ಷಗಳಿಂದ ಖಾಸಗಿಯವರಿಗೆ ವಹಿಸಲಾಗಿದೆ. 2017ರಲ್ಲಿ ದೇಶಾದ್ಯಂತ 151 ರೈಲುಗಳನ್ನು ಖಾಸಗಿಯವರಿಗೆ ನೀಡಲಾಗಿದೆ.
ಹಂತ ಹಂತವಾಗಿ ಇಡೀ ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡುವ ಉದ್ದೇಶ ಕೇಂದ್ರ ಸರ್ಕಾರಕ್ಕಿದೆ. ಇಡೀ ಇಲಾಖೆಯನ್ನು ಅದಾನಿ ಗ್ರೂಪ್ಗೆ ವಹಿಸಲು ಕೇಂದ್ರ ಮುಂದಾಗಿದೆಯೇ ಎಂಬ ಅನುಮಾನ ಶುರುವಾಗಿದೆ ಎಂದು ಟೀಕಿಸಿದರು.
ಈಗಾಗಲೇ ರೈಲಿನ ಇಂಜಿನ್ಗಳಿಗೆ ಅದಾನಿ ಕಂಪನಿ ಸ್ಟಿಕ್ಕರ್ಗಳನ್ನು ಅಂಟಿಸಲಾಗುತ್ತಿದೆ. ಮುಂದೊಂದು ದಿನ ಜನಸಾಮಾನ್ಯರು ರೈಲಿನ ಶೌಚಾಲಯವನ್ನು ಬಳಸಲೂ ಹಣ ನೀಡಬೇಕಾಗುವ ಪರಿಸ್ಥಿತಿ ಬರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋಹತ್ಯೆ ನಿಷೇಧದ ಮಸೂದೆ ಕುರಿತು ಪ್ರತಿಕ್ರಿಯಿಸಿ, ಇದರ ಹಿಂದೆ ರಾಜಕೀಯ ಉದ್ದೇಶ ಅಡಗಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ನಮ್ಮ ದೇಶದ ದನದ ಮಾಂಸದ ರಫ್ತು ಸುಮಾರು ಶೇ.25 ರಷ್ಟು ಹೆಚ್ಚಾಗಿದೆ. ಇಡೀ ಪ್ರಪಂಚದಲ್ಲೇ ಬೀಫ್ ರಫ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ದೇಶದಿಂದ ನಿತ್ಯ ಸುಮಾರು 20 ಲಕ್ಷ ಟನ್ನಷ್ಟು ದನದ ಮಾಂಸ ರಫ್ತಾಗುತ್ತಿದೆ. ದೇಶದ ಪ್ರಮುಖ ದನದ ಮಾಂಸದ ರಫ್ತು ಕಂಪನಿಗಳ ಮಾಲೀಕರು ಬಿಜೆಪಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಬಿಜೆಪಿಯವರಿಗೆ ಗಾಂಧಿ ತತ್ವದಲ್ಲಿ ನಂಬಿಕೆ ಇದ್ದರೆ ಕೂಡಲೇ ಎಲ್ಲ ರಫ್ತು ಕಂಪನಿಗಳನ್ನು ಮುಚ್ಚಿಸಲಿ ಎಂದು ಸವಾಲು ಹಾಕಿದರು.