ಮೈಸೂರು : ಯುವ ಸಮುದಾಯ, ಸಂಘಸಂಸ್ಥೆಗಳು ಗಿಡನೆಡುವ ಅಭಿಯಾನ ಹಮ್ಮಿಕೊಳ್ಳುವುದರೊಂದಿಗೆ ಮನೆಗೊಂದು ಗಿಡನೆಡಬೇಕು ಎಂದು ಮೈಸೂರು ಬಿಜೆಪಿ ಪ್ರಭಾರಿ ಮೈವಿ. ರವಿಶಂಕರ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿರವರ ಹುಟ್ಟುಹಬ್ಬದ ಅಂಗವಾಗಿ ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಅತಿಥಿಗೃಹದಲ್ಲಿ ಹಸಿರು ಲೋಕ ಮೈಸೂರು ಪರಿಸರ ಜಾಗೃತಿ ಕಾರ್ಯಕ್ರಮ ದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಇಂದಿನ ತಾಂತ್ರಿಕ ಯುಗದಲ್ಲಿ ಜನಸಂಖ್ಯೆ ವಾಹನದಟ್ಟನೆ ಹೆಚ್ಚಾದಂತೆ ವಾತಾವರಣ ಮಾಲಿನ್ಯಗೊಂಡು ಕಲುಷಿತವಾಗುತ್ತಿದೆ, ಯುವಸಮುದಾಯ ಕೃಷಿ ಚಟುವಟಿಕೆ ಕಡೆ ಮತ್ತು ಶಿಕ್ಷಣವಂತರಾಗಿ ಪದವಿಧರರಾದರೆ ದೇಶ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ, ಇಂದಿನ ದಿನದಲ್ಲಿ ನಾವೆಲ್ಲರೂ ಕೇವಲ ವಿಮೆ ಮಾಡಿಸಲು ಆಸಕ್ತಿ ತೋರುತ್ತಿದ್ದೇವೆ ಹೊರತು ಭವಿಷ್ಯದ ದೃಷ್ಟಿಯಲ್ಲಿ ಆಮ್ಲಜನಕ ಹಸಿರುವಲಯ ಸಂರಕ್ಷಣೆ ಮಾಡಲು ಮುಂದಾಗುತ್ತಿಲ್ಲ ಎಂದರು.
ಬಿಜೆಪಿಯ ವೈದ್ಯಕೀಯ ಪ್ರಕೋಷ್ಠ ಸಹ ಸಂಚಾಲಕ ಜೀವದಾರ ಗಿರೀಶ್ ಮಾತನಾಡಿ ಚೈತನ್ಯದ ಚಿಲುಮೆಯಂತಿರುವ ಮೋದಿ ಅವರು ಯುವ ಪೀಳಿಗೆಗೆ ಆಶಾಕಿರಣ. ಅವರ ರಾಜನೀತಿ ಹಾಗೂ ಆಡಳಿತ ಮಾದರಿಯಾಗಿದೆ. ಜಗತ್ತಿನ ಹಲವು ರಾಷ್ಟ್ರಗಳು ಮೋದಿ ಅವರನ್ನು ಮೆಚ್ಚಿಕೊಂಡಿವೆ. ಮೋದಿಯವರ ದೂರದೃಷ್ಟಿಯ ಫಲವಾಗಿ ಭಾರತ ಅಭಿವೃದ್ಧಿ ಪಥದಲ್ಲಿ ಸಾಗಿದೆ ಪಕ್ಷದ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ನಡೆದುಕೊಳ್ಳಬೇಕು.
ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪಕ್ಷದ ಕಾರ್ಯಕರ್ತರು ಜನರಿಗೆ ಅರಿವು ಮೂಡಿಸಿ ಯೋಜನೆಗಳು ಯಶಸ್ವಿಯಾಗುವಂತೆ ಮಾಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ಸಿಗಬೇಕು. ಕಾರ್ಯಕರ್ತರು ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಸಹ ಸಂಚಾಲಕ ರಾದ ಗಿರೀಶ್, ಕಡಕೊಳ ಜಗದೀಶ್, ವಿಕ್ರಮ್ ಅಯ್ಯಂಗಾರ್, ಸಂದೇಶ್ ಪವಾರ್, ಪ್ರಮೋದ್ ಗೌಡ, ಸದಾಶಿವ, ಸುಚೇಂದ್ರ, ಚಕ್ರಪಾಣಿ ಇದ್ದರು.