ಚಾಮರಾಜನಗರ : ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಸಹೋದರರಲ್ಲಿ ಓರ್ವ ಸಹೋದರ ಬೈಕ್ ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಆತ್ಮಹತ್ಯೆಗೆ ಶರಣಾದವನನ್ನು ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬಾಳನಹುಂಡಿ ಗ್ರಾಮದ ಬಸವರಾಧ್ಯ ಎಂದು ಗುರುತಿಸಲಾಗಿದೆ.
ಮೃತ ಬಸವಾರಾಧ್ಯ ಕಳೆದ 20 ದಿನಗಳ ಹಿಂದಷ್ಟೆ ಕನಕಪುರ ರಸ್ತೆ ಮಾರ್ಗದಲ್ಲಿ ಅಪಘಾತಕ್ಕಿಡಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆಗೆ ಬಂದಿದ್ದ. ಇಂದು ತಮ್ಮ ಪ್ರಮೋದ್ ಜೊತೆ ಕೊಳ್ಳೇಗಾಲದ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆಂದು ಬರುವ ವೇಳೆ ಬಸವರಾಧ್ಯ ಬೈಕ್ ನಿಲ್ಲಿಸು ನನಗೆ ವಾಂತಿ ಬರುವಂತಿದೆ ಎಂದು ಹೇಳಿದ್ದಾನೆ. ಅಣ್ಣ ಮಾತಿನಂತೆ ಸಹೋದರ ಬೈಕ್ ನಿಲ್ಲಿಸಿದ್ದಾನೆ. ಈ ವೇಳೆ ಏಕಾಏಕಿ ಬಸವರಾಧ್ಯ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಶೋಧ ಕಾರ್ಯ ನಡೆಸಿದ್ದಾರೆ. ನೀರಿನ ಹರಿವು ಹೆಚ್ಚಾದ್ದರಿಂದ ಯುವಕನ ದೇಹ ಪತ್ತೆಯಾಗಿಲ್ಲ. ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.