ಚಾಮರಾಜನಗರ: ಜೀಪಿನಿಂದ ಹಾರಿ ಆರೋಪಿ ಯುವಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಐವರು ಪೊಲೀಸರು ಅಮಾನತುಗೊಂಡಿದ್ದಾರೆ.
ಯಳಂದೂರು ಸಿಪಿಐ ಶಿವಮಾದಯ್ಯ, ಪಿಎಸ್ಐ ಮಹದೇವಗೌಡ, ಎಎಸ್ಐ ಚೆಲುವರಾಜ್, ಹೆಡ್ ಕಾನ್ಸ್ಟೇಬಲ್ ಭದ್ರಮ್ಮ, ಕಾನ್ಸ್ಟೇಬಲ್ ಸೋಮಶೇಖರ್ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ. ಆರೋಪಿ ಬಂಧಿಸಿ ಕರೆತರುವಾಗ ಕರ್ತವ್ಯಲೋಪ ಎಸಗಿದ್ದಾರೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಈಅಮಾನತು ಆದೇಶ ಹೊರಬಿದ್ದಿದೆ.
ಯಳಂದೂರು ತಾಲೂಕಿನ ಕುಂತೂರುಮೋಳೆ ಗ್ರಾಮದ ನಿಂಗರಾಜು(21) ಎಂಬಾತನ ವಿರುದ್ಧ ಅಪ್ರಾಪ್ತೆ ಅಪಹರಿಸಿದ ದೂರು ದಾಖಲಾಗಿತ್ತು. ಮಂಗಳವಾರ ಆತನನ್ನು ಪೊಲೀಸರು ಠಾಣೆಗೆ ಕರೆದೊಯ್ಯವಾಗ ಪರಾರಿಯಾಗಲು ಜೀಪಿನಿಂದ ಲಿಂಗರಾಜು ಹಾರಿ ತೀವ್ರವಾಗಿ ಗಾಯಗೊಂಡಿದ್ದಾನೆ. ಬಳಿಕ, ಆಸ್ಪತ್ರೆಗೆ ರವಾನಿಸಲಾಯಿತಾದರೂ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಅಮಾನತು ಆದೇಶಕ್ಕೆ ದಲಿತ ಸಂಘಟನೆಗಳು ಆಕ್ರೋಶಗೊಂಡು ಬುಧವಾರ ಪ್ರತಿಭಟನೆ ನಡೆಸಿದ್ದಾರೆ.