ಚಾಮರಾಜನಗರ: ಸರ್ಕಾರಿ ಶಾಲಾ ಕಟ್ಟಡದ ಕಾಮಗಾರಿಯ ಬಿಲ್ ಮಂಜೂರಾತಿಗಾಗಿ ಗುತ್ತಿಗೆದಾರನ ಬಳಿ ಲಂಚ ಪಡೆದಿದ್ದ ಇಬ್ಬರು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳು ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿ ವೇಳೆ ಹಣದ ಸಹಿತ ಸಿಕ್ಕಿಬಿದ್ದಿದ್ದಾರೆ.
ಚಾಮರಾಜನಗರ ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆಂಪರಾಜು ಮತ್ತು ಕಿರಿಯ ಇಂಜಿನಿಯರ್ ಮಧುಸೂದನ್ ಲೋಕಾಯುಕ್ತ ಬಲೆಗೆ ಬಿದ್ದ ಲಂಚಬಾಕರು. ಅವರು ಕಾಮಗಾರಿಯ ಬಿಲ್ ಮಂಜೂರು ಮಾಡಲು ಗುತ್ತಿದಾರರ ಬಳಿ ಲಂಚಕ್ಕೆ ಪೀಡಿಸುತ್ತಿದ್ದರು ಎನ್ನಲಾಗಿದೆ.
ಈ ಸಂಬಂಧ ನಗರದ ಸೂರ್ಯ ಬಿಲ್ಡರ್ ಅಂಡ್ ಡೆವೆಲಪರ್ ಸಂಸ್ಥೆಯು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ವಿರುದ್ಧ ಲೋಕಾಯಕ್ತಕ್ಕೆ ದೂರು ನೀಡಲಾಗಿತ್ತು. ಹೀಗಾಗಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸನ್ನದ್ಧರಾಗಿದ್ದರು. ಈ ನಡುವೆ ಶುಕ್ರವಾರ ಸಂಜೆ ಕಾಮಗಾರಿ ನಡೆದ ಸ್ಥಳದಲ್ಲಿ ಮಧುಸೂದನ್ ಅವರು ಗುತ್ತಿಗೆದಾರನಿಂದ 30 ಸಾವಿರ ರೂ ಲಂಚ ಪಡೆದಿದ್ದಾರೆ. ಆ ನಂತರ ಆ ಹಣವನ್ನು ಕಾರಿನಲ್ಲಿಟ್ಟುಕೊಂಡು ಬರುವ ವೇಳೆ ಕುದೇರು ಚಾಮುಲ್ ಘಟಕದ ಬಳಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ವೇಳೆ ಇಬ್ಬರು ಇಂಜಿನಿಯರ್ ಹಣ ಸಹಿತ ಸಿಕ್ಕಿ ಬಿದ್ದಿದ್ದಾರೆ.
ಚಾಮರಾಜನಗರ ಲೋಕಾಯುಕ್ತ ಡಿವೈಎಸ್ಪಿ ಕೆ.ಟಿ.ಮ್ಯಾಥ್ಯೂ ಥಾಮಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.